ADVERTISEMENT

ಎರ್ಮಾಯಿ ಫಾಲ್ಸ್‌ನಲ್ಲಿ ಚಿತ್ರ ನಿರ್ದೇಶಕ ಸಾವು

​ಪ್ರಜಾವಾಣಿ ವಾರ್ತೆ
Published 30 ಮೇ 2018, 19:30 IST
Last Updated 30 ಮೇ 2018, 19:30 IST
ಸಂತೋಷ್‌ ಕುಮಾರ್ ಶೆಟ್ಟಿ ಕಟೀಲ್
ಸಂತೋಷ್‌ ಕುಮಾರ್ ಶೆಟ್ಟಿ ಕಟೀಲ್   

ಉಜಿರೆ: ‘ಕನಸು ಕಣ್ಣು ತೆರೆದಾಗ’ ಚಿತ್ರ ಖ್ಯಾತಿಯ ನಿರ್ದೇಶಕ ಸಂತೋಷ್‌ ಕುಮಾರ್‌ ಶೆಟ್ಟಿ ಕಟೀಲ್‌ (35) ಬೆಳ್ತಂಗಡಿ ತಾಲ್ಲೂಕಿನ ಎರ್ಮಾಯಿ ಫಾಲ್ಸ್‌ನಲ್ಲಿ ಬುಧವಾರ ಕಾಲು ಜಾರಿ ಬಿದ್ದು, ನೀರಿನ ಸೆಳೆತಕ್ಕೆ ಸಿಕ್ಕಿ ಮೃತಪಟ್ಟಿದ್ದಾರೆ.

ನಿರ್ಮಾಪಕ ಸತ್ಯೇಂದ್ರ ಅವರ ‘ಗಂಧದ ಕುಡಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮಂಡಳಿಗೆ ಕಳುಹಿಸಲಾಗಿತ್ತು. ಅದರ ಪ್ರಚಾರಕ್ಕಾಗಿ ಫ್ಲೆಕ್ಸ್ ಅಳವಡಿಸಲು ಚಿತ್ರವೊಂದು ಬೇಕಾಗಿತ್ತು. ಇದಕ್ಕಾಗಿ ಎರ್ಮಾಯಿ ಫಾಲ್ಸ್‌ ಅನ್ನು ಆಯ್ಕೆ ಮಾಡಿದ್ದರು. ಬುಧವಾರ ಬೆಳಿಗ್ಗೆ 5 ಜನರ ತಂಡ ಇಲ್ಲಿಗೆ ಬಂದಿತ್ತು.

ಚಿತ್ರೀಕರಣ ನಡೆಯುವ ಮೊದಲು ಸಂತೋಷ್‌ ಅವರು ಫಾಲ್ಸ್‌ನಲ್ಲಿ ಈಜಾಡಿಕೊಂಡು ಬಂದಿದ್ದರು. ಬಳಿಕ ಚಿತ್ರಕ್ಕೆ ಬೇಕಾದಂತೆ ವಸ್ತ್ರವನ್ನು ಧರಿಸಿ ನೀರಿನಲ್ಲಿ ಹಿಮ್ಮುಖವಾಗಿ ಚಲಿಸಿ ಚಿತ್ರ ತೆಗೆಸಲು ಹೋಗುತ್ತಿದ್ದ ವೇಳೆ ನೀರಿನ ಆಳ ಗೊತ್ತಾಗದೆ ಆಯತಪ್ಪಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ADVERTISEMENT

ಇತರರಿಗೆ ಈಜು ಬಾರದ ಕಾರಣ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಗುರುವಾಯನ ಕೆರೆಯಲ್ಲಿರುವ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿದರೂ ಅವರು ಬರುವ ವೇಳೆ ಸಂತೋಷ್‌ ಮೃತಪಟ್ಟಿದ್ದರು.

ಶವವನ್ನು ಬೆಳ್ತಂಗಡಿ ಶವಾಗಾರದಲ್ಲಿ ಇರಿಸಲಾಗಿದೆ. ನಿರ್ಮಾಪಕ ಸತ್ಯೇಂದ್ರ ಎಂಬುವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.