ADVERTISEMENT

ಎಲ್ಲ ವರ್ಗಕ್ಕೂ ತೆರಿಗೆ ಹೊರೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 19:10 IST
Last Updated 24 ಫೆಬ್ರುವರಿ 2011, 19:10 IST

ಬೆಂಗಳೂರು:  ಮೌಲ್ಯವರ್ಧಿತ ತೆರಿಗೆ ಕಾಯ್ದೆಯಡಿ ಬರುವ ಅಧಿಸೂಚಿತವಲ್ಲದ (ಅನ್‌ಷೆಡ್ಯೂಲ್ಡ್) ಪದಾರ್ಥಗಳ ಮೇಲಿನ ತೆರಿಗೆಯನ್ನು ಶೇ 13.50ರಿಂದ ಶೇ 14ಕ್ಕೆ ಹೆಚ್ಚಿಸಲು ನಿರ್ಧರಿಸಿರುವುದು ಮತ್ತು ಚಿನ್ನ - ಬೆಳ್ಳಿ ಖರೀದಿಯೂ  ದುಬಾರಿಯಾಗಲಿರುವುದರಿಂದ ಸಮಾಜದ ಎಲ್ಲ ವರ್ಗದ ಜನರಿಗೆ ತೆರಿಗೆ ಹೊರೆಯ ಬಿಸಿ ತಟ್ಟಲಿದೆ. ಅಕ್ಕಿ, ಬೇಳೆ, ಗೋಧಿ ಮತ್ತು ಗೋಧಿ ಉತ್ಪನ್ನಗಳಾದ ಮೈದಾ ಮುಂತಾದವುಗಳ ಮೇಲಿನ ‘ವ್ಯಾಟ್’ ವಿನಾಯ್ತಿಯನ್ನು ಇನ್ನೂ ಒಂದು ವರ್ಷದವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಇವುಗಳ ಬೆಲೆ ಹೆಚ್ಚಳಗೊಳ್ಳುವ ಸಾಧ್ಯತೆಗಳಿಲ್ಲ.

ಗ್ರಾಹಕರು, ವರ್ತಕರಿಗೆ ಹೊರೆ: ಆದರೆ, ‘ವ್ಯಾಟ್’ ಕಾಯ್ದೆಯಡಿ ಅನ್‌ಷೆಡೂಲ್ಡ್ ಪದಾರ್ಥಗಳೆಂದು ಗುರುತಿಸುವ ದಿನನಿತ್ಯ ಬಳಕೆಯ ಸಾಬೂನು, ಶಾಂಪು, ಮಿಠಾಯಿ, ಬಿಸ್ಕತ್ತು, ತುಪ್ಪ, ಒಣ ಹಣ್ಣುಗಳು, ವಿದ್ಯುತ್ ಉಪಕರಣ, ಗೃಹ ನಿರ್ಮಾಣ ರಂಗದಲ್ಲಿ ಬಳಸುವ ಹಾರ್ಡ್‌ವೇರ್ ಸಲಕರಣೆ, ಪ್ಲೈವುಡ್, ಪ್ಲಾಸ್ಟಿಕ್ ಮತ್ತಿತರ ಸಲಕರಣೆಗಳ ಮೇಲೆ ಶೇ 0.50ರಷ್ಟು ಹೆಚ್ಚು ತೆರಿಗೆ ವಿಧಿಸಿರುವುದು ಗ್ರಾಹಕರು, ವರ್ತಕರಿಗೆ ಹೊರೆಯಾಗಿ ಪರಿಣಮಿಸಲಿದೆ.

ವರ್ತಕರು ಅದರಲ್ಲೂ ಗಡಿಪ್ರದೇಶಗಳಲ್ಲಿನ ವ್ಯಾಪಾರಿಗಳು ನೆರೆ ರಾಜ್ಯಗಳಿಂದ ಇಂತಹ ಸರಕುಗಳನ್ನು ಖರೀದಿಸಿ ತಂದು ಮಾರಾಟ ಮಾಡಲು ಉಪಕ್ರಮಿಸಿದರೆ ಅದರಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾದ ಉದ್ದೇಶಿತ ವರಮಾನ ಬರದೇ ಹೋಗುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.