ADVERTISEMENT

`ಎಸ್‌ಡಿಎಂಸಿ' ಖಾತೆಗೆ ನೇರ ಅನುದಾನ

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 19:59 IST
Last Updated 18 ಜೂನ್ 2013, 19:59 IST

ಬೆಂಗಳೂರು: ಇನ್ನು ಮುಂದೆ ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಗಳ ಬ್ಯಾಂಕ್ ಖಾತೆಗಳಿಗೆ ಸರ್ವ ಶಿಕ್ಷಣ ಅಭಿಯಾನದ (ಎಸ್‌ಎಸ್‌ಎ) ಅನುದಾನ ನೇರವಾಗಿ ವರ್ಗವಾಗಲಿದೆ.

ಅನುದಾನ ಬಿಡುಗಡೆಯಲ್ಲಿ ವಿಳಂಬ ಮತ್ತು ದುರುಪಯೋಗ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಅನುದಾನ ಹಂಚಿಕೆ ವಿಕೇಂದ್ರೀಕರಣಗೊಳಿಸುವ ಉದ್ದೇಶವನ್ನೂ ಸಹ ಈ ವ್ಯವಸ್ಥೆ ಹೊಂದಿದ್ದು, ಎಲ್ಲ ಎಸ್‌ಡಿಎಂಸಿಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುವುದು ಕಡ್ಡಾಯವಾಗಿದೆ. ಈ ಎಲ್ಲ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ತನ್ನ ಬಳಿ ಇಟ್ಟುಕೊಳ್ಳುವ ಎಸ್‌ಎಸ್‌ಎ, ಹಣಕಾಸಿನ ವ್ಯವಹಾರಗಳ ಮೇಲೆ ಪೂರ್ಣ ನಿಗಾ ವಹಿಸಲಿದೆ.

ಎಸ್‌ಡಿಎಂಸಿಗಳಿಗೆ ಎಷ್ಟು ಹಣ ಹಂಚಿಕೆಯಾಗಿದೆ ಮತ್ತು ಎಷ್ಟು ಬಾಕಿ ಉಳಿದಿದೆ ಹಾಗೂ ಹೇಗೆ ವೆಚ್ಚ ಮಾಡಲಾಗಿದೆ ಸೇರಿದಂತೆ ಎಲ್ಲ ವಿವರಗಳನ್ನು ನಿರಂತರವಾಗಿ ಪರಿಶೀಲಿಸಲಿದೆ. ಈ ಮೂಲಕ ಸಕಾಲದಲ್ಲಿ ಮತ್ತು ಸಮರ್ಪಕವಾಗಿ ಅನುದಾನ ಬಳಕೆಯಾಗುವಂತೆ ಕ್ರಮ ಕೈಗೊಳ್ಳಲಿದೆ.

ಮೊದಲು ಪ್ರತಿಯೊಂದು ಕಾರ್ಯಕ್ರಮಕ್ಕೆ ಹಲವು ಹಂತಗಳ ಅಧಿಕಾರಿಗಳ ಮೂಲಕ ಎಸ್‌ಡಿಎಂಸಿಗಳಿಗೆ ಅನುದಾನ ಬಿಡುಗಡೆಯಾಗುತ್ತಿತ್ತು.  ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಅನುದಾನ ತಲುಪಿ, ನಂತರ ಎಸ್‌ಡಿಎಂಸಿಗಳಿಗೆ ಹಂಚಿಕೆಯಾಗುತ್ತಿತ್ತು.

ಈ ಎಲ್ಲ ಪ್ರಕ್ರಿಯೆಗಳಿಂದ ಅನುದಾನ ತಲುಪುವುದು ವಿಳಂಬವಾಗಿ ಯೋಜನೆಅನುಷ್ಠಾನ ಮಂದಗತಿಯಲ್ಲಿ ಸಾಗುತ್ತಿದ್ದವು. ಜತೆಗೆ   ತಾರತಮ್ಯ ಸಹ ನಡೆಯುತ್ತಿತ್ತು. ಅಧಿಕಾರಿಗಳ  ಮನೋಭಿಲಾಷೆಗೆ ತಕ್ಕಂತೆ ಅನುದಾನ ಬಿಡುಗಡೆಯಾದ ಪ್ರಕರಣಗಳು ವರದಿಯಾಗಿದ್ದರಿಂದ ಈ ಬದಲಾವಣೆ ಮಾಡಲಾಗಿದೆ.

`ನಿರ್ದಿಷ್ಟ ಯೋಜನೆಗೆ ಅನುದಾನ ಮೀಸಲಿಡಲಾಗುತ್ತಿತ್ತು. ಆದರೆ, ಪ್ರಧಾನ ಕಚೇರಿ ಗಮನಕ್ಕೆ ತಾರದೆ ಜಿಲ್ಲಾಮಟ್ಟದಲ್ಲೇ ಯೋಜನೆ ಮೂಲ ಸ್ವರೂಪವನ್ನೇ ಬದಲಾಯಿಸಿ ಇತರ ಯೋಜನೆಗಳಿಗೆ ಈ ಅನುದಾನ ಬಳಸಿಕೊಳ್ಳಲಾಗುತ್ತಿತ್ತು. ಇದರಿಂದ ಉದ್ದೇಶಿತ ಯೋಜನೆಗೆ ಅನುದಾನ ದೊರೆಯದೇ ವಿಫಲವಾಗುತ್ತಿತ್ತು' ಎಂದು ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಸುಬೋಧ್ ಯಾದವ್ ಹೇಳಿದರು.

`ಈ ಹೊಸ ವ್ಯವಸ್ಥೆಯಿಂದ ಎಸ್‌ಎಸ್‌ಎ ಅನುದಾನದ ಬಳಕೆ ವಿಕೇಂದ್ರೀಕರಣಕ್ಕೂ ಅವಕಾಶವಾಗಲಿದೆ ಮತ್ತು ವೆಚ್ಚದ ಬಗ್ಗೆ ನಿಗಾ ವಹಿಸುವುದು ಸುಲಭವಾಗಲಿದೆ. ಜತೆಗೆ ತಾರತಮ್ಯ ನಡೆದಿರುವ ಮೂಲವನ್ನೂ ಪತ್ತೆ ಮಾಡಬಹುದು. ನಿರ್ದಿಷ್ಟ ಯೋಜನೆಗೆ ಅನುದಾನ ಹಂಚಿಕೆಯಾದ ಸಂಪೂರ್ಣ ವಿವರ ಮತ್ತು ಯಾವ ಏಜೆನ್ಸಿ ಅಥವಾ ಸಂಸ್ಥೆಗೆ ಈ ಯೋಜನೆ ವಹಿಸಲಾಗಿದೆ ಎಂಬ ಪೂರ್ಣ ವಿವರ ನಮ್ಮ ಬಳಿ ಲಭ್ಯವಿರುತ್ತದೆ. ಈ ಅನುದಾನ ಯಾವ ರೀತಿ ಖರ್ಚು ಮಾಡಲಾಗುತ್ತಿದೆ ಎನ್ನುವುದನ್ನು ನಿರಂತರ ಪರಿಶೀಲಿಸಲಾಗುವುದು' ಎಂದರು.

ಎಸ್‌ಡಿಎಂಸಿಗಳಿಗೆ ಬಿಡುಗಡೆಯಾದ ಅನುದಾನದ ವಿವರಗಳು ಡಿಡಿಪಿಐ ಮತ್ತು ಬಿಇಒಗೆ ದೊರೆಯಲಿದೆ. ಈ  ಅಧಿಕಾರಿಗಳು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಹಾಗೂ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳ ಜತೆಗೂಡಿ ಎಸ್‌ಎಸ್‌ಎ ಅನುದಾನ ಬಳಕೆಯ ಉಸ್ತುವಾರಿ ವಹಿಸಲಿದ್ದಾರೆ.ಸದ್ಯಕ್ಕೆ ಎಸ್‌ಡಿಎಂಸಿಗಳ ಶೇ 80ರಷ್ಟು ಬ್ಯಾಂಕ್ ಖಾತೆಗಳ ವಿವರಗಳು ಎಸ್‌ಎಸ್‌ಎನಲ್ಲಿ ಲಭ್ಯ ಇದೆ. ಇದನ್ನು ರಿಶೀಲಿಸುವ ಕಾರ್ಯ ಇದೀಗ ಆರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.