ADVERTISEMENT

ಎ ಸ್ಕೀಂ: ನಿರ್ಲಕ್ಷ್ಯದಿಂದ ಹರಿದು ಹೋದ ನೀರು

​ಪ್ರಜಾವಾಣಿ ವಾರ್ತೆ
Published 9 ಜನವರಿ 2011, 13:05 IST
Last Updated 9 ಜನವರಿ 2011, 13:05 IST

ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ರಾಜ್ಯದ ಅತ್ಯಂತ ಪ್ರಮುಖ ಯೋಜನೆ. ಸಾವಿರಾರು ಹೆಕ್ಟೇರ್ ಭೂಮಿಯನ್ನು ನೀರಾವರಿ ಮಾಡಬೇಕಾದ ಯೋಜನೆ ಇದು. ಯೋಜನೆ ಆರಂಭವಾಗಿದ್ದು 60ರ ದಶಕದಲ್ಲಿ. ಆದರೆ ಇದುವರೆಗೆ ಉದ್ದೇಶ ಮಾತ್ರ ಈಡೇರಿಲ್ಲ.

ವಿಜಾಪುರ, ಬಾಗಲಕೋಟೆ, ಗುಲ್ಬರ್ಗ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ಕೃಷ್ಣಾ ಕೊಳ್ಳ ರಾಜ್ಯದ ಶೇಕಡಾ 70ಕ್ಕೂ ಹೆಚ್ಚು ಭಾಗವನ್ನು ಆವರಿಸಿದ್ದರೆ, ಅದರಲ್ಲಿ ಮೇಲ್ದಂಡೆ ಯೋಜನೆಯದ್ದು ಸಿಂಹಪಾಲು.

ಮಹಾರಾಷ್ಟ್ರದಿಂದ ಹರಿದು ಬರುವ ಕೃಷ್ಣಾ ನದಿ ನೀರು ಕರ್ನಾಟಕದ ನೆಲವನ್ನು ದಾಟಿ ಆಂಧ್ರಪ್ರದೇಶದಲ್ಲಿ ಬಂಗಾಳಕೊಲ್ಲಿಯನ್ನು ಸೇರುವುದಕ್ಕಿಂತ ಮುಂಚೆ, ನೀರಿನ ಸದುಪಯೋಗ ಆಗಲೆಂಬ ಸದಾಶಯದಿಂದ ಮೇಲ್ದಂಡೆ ಯೋಜನೆಗೆ ನಾಂದಿ ಹಾಡಿದ್ದು ಈಗ ಇತಿಹಾಸ.

ADVERTISEMENT

ಕೃಷ್ಣಾ ಕೊಳ್ಳದ ಆಯಕಟ್ಟಿನ ಸ್ಥಳವಾದ ಆಲಮಟ್ಟಿಯಲ್ಲಿ ಬೃಹತ್ ಅಣೆಕಟ್ಟೆ ನಿರ್ಮಿಸುವ ಮೂಲಕ ಯೋಜನೆಯನ್ನು ಜಾರಿಗೆ ತರಬೇಕು, ರಾಜ್ಯದ ಉತ್ತರ ಭಾಗವನ್ನು ಹಸಿರು ಮಾಡಬೇಕೆಂಬ ಕನಸಿನೊಂದಿಗೆ 1963-1964ರಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು. ಪ್ರಾರಂಭದ ದಿನದಿಂದಲೇ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವೆ ನೀರಿನ ಬಳಕೆಗೆ ಸಂಬಂಧಿಸಿದಂತೆ ವಿವಾದ ಶುರುವಾಯಿತು. ವಿವಾದದ ನಡುವೆಯೇ 1964ರಲ್ಲಿ ಆಲಮಟ್ಟಿ ಅಣೆಕಟ್ಟೆಗೆ ಶಂಕುಸ್ಥಾಪನೆಯೂ ನಡೆಯಿತು.

ಮತ್ತೊಂದೆಡೆ ಆರ್.ಎಸ್.ಬಚಾವತ್ ನ್ಯಾಯಮಂಡಳಿಯನ್ನೂ ರಚಿಸಲಾಯಿತು. ಮೂರೂ ರಾಜ್ಯಗಳಿಗೆ ನೀರು ಹಂಚಿಕೆಯ ಪ್ರಮಾಣವನ್ನು ನಿಗದಿಪಡಿಸಿದ ಬಚಾವತ್ ನ್ಯಾಯಮಂಡಳಿ, ನಿಗದಿ ಪಡಿಸಿದ ನೀರನ್ನು 2000 ಇಸವಿ ವೇಳೆಗೆ ‘ಎ’ ಸ್ಕೀಂನಲ್ಲಿ ಬಳಸಿಕೊಳ್ಳುವಂತೆ 1973ರಲ್ಲಿ ಐತೀರ್ಪು ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.