ADVERTISEMENT

ಏಪ್ರಿಲ್ ಕೊನೆ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 19:30 IST
Last Updated 20 ಮಾರ್ಚ್ 2018, 19:30 IST

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಏಪ್ರಿಲ್ ಕೊನೆ ವಾರದಲ್ಲಿ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು.

2017ರಲ್ಲಿ ಮೇ 11ರಂದು ಫಲಿತಾಂಶ ಪ್ರಕಟವಾಗಿತ್ತು. ಈ ವರ್ಷ ಅಷ್ಟು ವಿಳಂಬವಾಗುವುದಿಲ್ಲ. ಕಳೆದ ವರ್ಷ 42 ಕೇಂದ್ರಗಳನ್ನು ತೆರೆಯಲಾಗಿತ್ತು. 19,000 ಮೌಲ್ಯಮಾಪಕರಿದ್ದರು. ಈ ವರ್ಷ ಮೌಲ್ಯಮಾಪನ ತ್ವರಿತವಾಗಿ ಮುಗಿಸಲು 53 ಕೇಂದ್ರಗಳನ್ನು ತೆರೆಯಲಾಗಿದ್ದು, 23,890 ಮೌಲ್ಯಮಾಪಕರನ್ನು ನಿಯೋಜಿಸಲಾಗಿದೆ ಎಂದು ಅವರು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಪೂರಕ ಪರೀಕ್ಷೆಯನ್ನು ಕಳೆದ ವರ್ಷ ಜುಲೈನಲ್ಲಿ ನಡೆಸಲಾಗಿದ್ದು, ಈ ವರ್ಷ ಮೇ ನಲ್ಲಿಯೇ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿಇಟಿ ಮತ್ತು ನೀಟ್ ಬರೆಯುವ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲ ಆಗಲಿದೆ ಎಂದರು.

ADVERTISEMENT

ಇದೇ 23ರಿಂದ ಆರಂಭವಾಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಮೇ ಮೊದಲ ವಾರದಲ್ಲೆ ಪ್ರಕಟಿಸಲಾಗುವುದು ಎಂದೂ ಅವರು ವಿವರಿಸಿದರು.

ಸಂಧಾನ ಸಭೆ ಇಂದು: ತನ್ವೀರ್ ಸೇಠ್

ವೇತನ ತಾರತಮ್ಯ ಸರಿಪಡಿಸಲು ಒತ್ತಾಯಿಸಿ ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾಗಿರುವ ಪಿಯು ಉಪನ್ಯಾಸಕರೊಂದಿಗೆ ಸಚಿವ ತನ್ವೀರ್ ಸೇಠ್ ಬುಧವಾರ ಸಂಧಾನ ಸಭೆ ನಡೆಸಲಿದ್ದಾರೆ.

‘ಉಪನ್ಯಾಸಕರ ಬೇಡಿಕೆಗಳ ಕುರಿತು 6ನೇ ವೇತನ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ. ಮುಷ್ಕರ ನಡೆಸು ವವರ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ 1983ರಡಿ ಕಾನೂನು ಕ್ರಮ ಮತ್ತು ಮೌಲ್ಯಮಾಪನಕ್ಕೆ ಭಾಗಿ
ಯಾಗುವ ಸಿಬ್ಬಂದಿಗೆ ತೊಂದರೆ ನೀಡುವ ವ್ಯಕ್ತಿಗಳಿಗೆ ₹ 5 ಲಕ್ಷ ದಂಡ ಮತ್ತು 5 ವರ್ಷ ಸೆರೆವಾಸ ವಿಧಿಸುವ ಅವಕಾಶವಿದೆ. ಆದರೆ, ಅದಕ್ಕೆ ಅವಕಾಶ ನೀಡದೆ ಮಾತುಕತೆ ಮೂಲಕ ಬಗೆಹರಿಸುತ್ತೇವೆ’ ಎಂದು ಸೇಠ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.