ADVERTISEMENT

ಐ.ಟಿ. ದಾಳಿ: ಮಹತ್ವದ ದಾಖಲೆ ವಶ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 18:25 IST
Last Updated 15 ಫೆಬ್ರುವರಿ 2011, 18:25 IST
ಐ.ಟಿ. ದಾಳಿ: ಮಹತ್ವದ ದಾಖಲೆ ವಶ
ಐ.ಟಿ. ದಾಳಿ: ಮಹತ್ವದ ದಾಖಲೆ ವಶ   

ಹೊಸಪೇಟೆ: ಹೊಸಪೇಟೆ, ಬೆಂಗಳೂರು ಮತ್ತು ಯಲ್ಲಾಪುರದ ಡ್ರೀಮ್ ಲಾಜಿಸ್ಟಿಕ್ ಕಂಪೆನಿ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಮಂಗಳವಾರ ಏಕ ಕಾಲಕ್ಕೆ ದಾಳಿ ನಡೆಸಿದ್ದು ಮಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಯಲ್ಲಾಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ವಿವೇಕ್ ಹೆಬ್ಬಾರ ಮಾಲೀಕತ್ವದ ಡ್ರೀಮ್ ಲಾಜಿಸ್ಟಿಕ್‌ನ ಪ್ರಧಾನ ಕಚೇರಿ ಉ.ಕ. ಜಿಲ್ಲೆಯ ಯಲ್ಲಾಪುರ, ಹೊಸಪೇಟೆ ಹಾಗೂ ಬೆಂಗಳೂರಿನ ಕಚೇರಿಗಳು, ಮತ್ತು ಬೆಂಗಳೂರಿನ ಡಿಎಲ್‌ಸಿ ಅತಿಥಿಗೃಹ ಮತ್ತು ಹೋಟೆಲ್ ಮತ್ತು ಕಂಪೆನಿ ಪಾಲುದಾರರಾದ ಪ್ರಕಾಶ ಹೆಗಡೆ ಮತ್ತು ಪ್ರಭು ಅವರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ.

ಬೆಂಗಳೂರು ಆದಾಯ ತೆರಿಗೆ ಅಧಿಕಾರಿಗಳಾದ ಗುರುಪ್ರಸಾದ ಮತ್ತು ಮೇಘನಾಥ ಚವ್ಹಾಣ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಆರಂಭವಾಗಿರುವ ದಾಳಿಯಲ್ಲಿ ಇಲಾಖೆಯ 30ಕ್ಕೂ ಹೆಚ್ಚು ಅಧಿಕಾರಿಗಳು ಪಾಲ್ಗೊಂಡಿದ್ದಾರೆ.

ಈ ಕಂಪೆನಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕುವಂತೆ ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಯಲ್ಲಾಪುರದಲ್ಲಿ ಕೇಂದ್ರ ಕಚೇರಿ ಹೊಂದಿದ್ದರೂ ಬಹುತೇಕ ವ್ಯವಹಾರಗಳ ಕೇಂದ್ರೀಕೃತವಾಗಿರುವ ಹೊಸಪೇಟೆಯ ಡ್ಯಾಂ ರಸ್ತೆಯಲ್ಲಿರುವ ಸಾಯಿಬಾಬಾ ದೇವಸ್ಥಾನದ ಹತ್ತಿರದ ಲಾಜಿಸ್ಟಿಕ್ ಕಂಪೆನಿಯ ಕಚೇರಿಯಲ್ಲಿಯೇ ಹೆಚ್ಚಿನ ಮಾಹಿತಿಗಳು ಲಭ್ಯವಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.