ADVERTISEMENT

ಒತ್ತಡ ತಂತ್ರ: ಶಾಸಕರಿಗೆ ಬಿಎಸ್‌ವೈ ಭೋಜನ ಕೂಟ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 8:30 IST
Last Updated 23 ಫೆಬ್ರುವರಿ 2012, 8:30 IST

ಬೆಂಗಳೂರು (ಪಿಟಿಐ): ಮರಳಿ ಮುಖ್ಯಮಂತ್ರಿ ಗದ್ದುಗೆ ಏರಲು ಶತಾಯಗತಾಯ ಪ್ರಯತ್ನ ನಡೆಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿ ಗುರುವಾರ ಶಾಸಕರ ಸಭೆ ನಡೆಸಿದರು.

ಶಾಸಕರು ಮತ್ತು ಸಂಸದರ ಚಿಂತನ - ಮಂಥನ ಸಭೆಯಲ್ಲಿ ಭಾಗವಹಿಸಲು ಸಂಜೆ ನಗರಕ್ಕೆ ಆಗಮಿಸುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಎದುರು ಶಕ್ತಿ ಪ್ರದರ್ಶನ ನಡೆಸಲು ಉದ್ದೇಶಿಸಿರುವ ಯಡಿಯೂರಪ್ಪ ಅವರು, ಅದಕ್ಕೆ ಪೂರ್ವಭಾವಿ ತಯಾರಿ ನಡೆಸಲು ತಮ್ಮ ರೇಸ್‌ಕೋರ್ಸ್ ರಸ್ತೆಯ  ನಿವಾಸದಲ್ಲಿ ಗುರುವಾರ ಭೋಜನ ಕೂಟ ಏರ್ಪಡಿಸಿ ಶಾಸಕರನ್ನು ಆಹ್ವಾನಿಸಿದ್ದರು.

ಭೋಜನ ಕೂಟದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹಾಗೂ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಭಾಗವಹಿಸಿದರಾದರೂ ಬೇಗನೆ ಅಲ್ಲಿಂದ ನಿರ್ಗಮಿಸಿದರು.

ಒಂದು ಮೂಲದ ಪ್ರಕಾರ ಯಡಿಯೂರಪ್ಪ ಅವರ ಶಕ್ತಿ ಪ್ರದರ್ಶನ ತಡೆಯುವ ನಿಟ್ಟಿನಲ್ಲಿ ಸದಾನಂದ ಗೌಡ ಅವರು ಮನವೊಲಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ಶುಕ್ರವಾರ ನಗರದ ಹೊರವಲಯದ ರೆಸಾರ್ಟ್‌ವೊಂದರಲ್ಲಿ ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ನಡೆಯುವ `ಚಿಂತನ -ಮಂಥನ ಬೈಠಕ್~ನಲ್ಲಿ  ಹೈಕಮಾಂಡ್ ನಾಯಕತ್ವ ಬದಲಾವಣೆ ಕುರಿತಂತೆ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದು, ಪಕ್ಷದೊಳಗಿನ ಭಿನ್ನಾಬಿಪ್ರಾಯಗಳು ಇನ್ನೆರಡು ದಿನಗಳಲ್ಲಿ ಬಗೆಹರಿಯಲಿವೆ~ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.