ADVERTISEMENT

ಒಳಚರಂಡಿಯಲ್ಲಿ ಉಸಿರುಗಟ್ಟಿ ಇಬ್ಬರು ಸಹೋದರರ ಸಾವು

​ಪ್ರಜಾವಾಣಿ ವಾರ್ತೆ
Published 22 ಜುಲೈ 2012, 19:30 IST
Last Updated 22 ಜುಲೈ 2012, 19:30 IST

ಹುಬ್ಬಳ್ಳಿ: ಒಳಚರಂಡಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಉಸಿರುಗಟ್ಟಿ ಸಹೋದರರಿಬ್ಬರು ಸಾವಿಗೀಡಾದ ಘಟನೆ ನಗರದ ಚಾಣುಕ್ಯಪುರಿ ರಸ್ತೆಯ ಶ್ರೀ ಮೌನೇಶ್ವರ ದೇವಸ್ಥಾನದ ಬಳಿ ಭಾನುವಾರ ಸಂಜೆ ಸಂಭವಿಸಿದೆ.

ಮೃತರನ್ನು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ನೆಲ್ಲೂರು ನಿವಾಸಿಗಳಾದ ರಮೇಶ (20) ಮತ್ತು ಸಂತೋಷ (19) ಎಂದು ಗುರುತಿಸಲಾಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಎಲ್ಲಾರಟ್ಟಿ ನಿವಾಸಿ ಬಸವರಾಜ ಹೊನ್ನಗೋಳ ಎಂಬುವವರು ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಕಿಮ್ಸಗೆ ದಾಖಲು ಮಾಡಲಾಗಿದೆ.
 
ಉತ್ತರ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ನಗರದಲ್ಲಿ ಮಲಿನ ನೀರು ಸಾಗಾಟ ಜಾಲಕ್ಕೆ ಸಂಬಂಧಪಟ್ಟ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯನ್ನು ಮುಂಬೈನ ಈಗಲ್ ಕನ್‌ಸ್ಟ್ರಕ್ಷನ್ ಕಂಪೆನಿ ಗುತ್ತಿಗೆ ತೆಗೆದುಕೊಂಡಿದೆ. ಈ ಕಂಪೆನಿಯಡಿ ದಿನಗೂಲಿಗೆ ಕೆಲಸ ಮಾಡುವ ಕಾರ್ಮಿಕರ ಪೈಕಿ ನಾಲ್ವರು ಒಳಚರಂಡಿ ಸ್ವಚ್ಛಗೊಳಿಸುವಾಗ ಈ ಘಟನೆ ನಡೆದಿದೆ.

ಇನ್ನೂ ಪಾಲಿಕೆಗೆ ಹಸ್ತಾಂತರಿಸಿದ, ಎಂಟು ತಿಂಗಳ ಹಿಂದೆಯಷ್ಟೇ ರಸ್ತೆ ಮಧ್ಯೆ ನಿರ್ಮಿಸಿದ ಒಳಚರಂಡಿಯ ಒಳಗೆ ಉಳಿದಿದ್ದ ಕಸ ಸ್ವಚ್ಛಗೊಳಿಸಲೆಂದು ಈ ಕಾರ್ಮಿಕರು ಮ್ಯಾನ್‌ಹೋಲ್ ತೆರೆದು ಇಳಿದಿದ್ದರು. ಆರಂಭದಲ್ಲಿ ರಮೇಶ ಒಳಗೆ ಇಳಿದ್ದ್ದಿದ. ಆತ ಉಸಿರುಗಟ್ಟಿ ಅಸ್ವಸ್ಥಗೊಳ್ಳುತ್ತಿದ್ದಂತೆಯೇ ಆತನ ರಕ್ಷಣೆಗೆ ಸಂತೋಷ ಇಳಿದಿದ್ದಾನೆ. ಇವರಿಬ್ಬರೂ ಮೇಲೆ ಬರಲು ಪ್ರಯತ್ನಿಸಿದರೂ ಸಾಧ್ಯವಾಗದೆ ಬಸವರಾಜ ಕೂಡಾ ಇಳಿದಿದ್ದಾನೆ.  

ಅಷ್ಟರಲ್ಲಿ ಈ ವಿಷಯ ಅರಿತ ಸ್ಥಳೀಯರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ರಮೇಶ ಮತ್ತು ಸಂತೋಷ ಕಿಮ್ಸಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದರು. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

`ಅಗ್ನಿಶಾಮಕ ಸಿಬ್ಬಂದಿ ನಿರ್ಲಕ್ಷ್ಯ~: `ಒಳಚರಂಡಿ ಒಳಗೆ ಉಸಿರುಗಟ್ಟಿ ಒದ್ದಾಡುತ್ತಿದ್ದ ಕಾರ್ಮಿಕರಿಗೆ ಸೂಕ್ತ ಸಮಯದಲ್ಲಿ ಆಮ್ಲಜನಕ ಪೂರೈಕೆಯಾಗಿದ್ದರೆ ಜೀವ ಉಳಿಸಬಹುದಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಆಮ್ಲಜನಕ ಸಿಲಿಂಡರ್ ಅನ್ನು ಸ್ಥಳಕ್ಕೆ ತಂದಿದ್ದರೂ ಅದನ್ನು ತೆರೆದು ಪೂರೈಸಲು ವಿಫಲರಾದರು. ಅಗ್ನಿಶಾಮಕ ಸಿಬ್ಬಂದಿಯ ನಿರ್ಲಕ್ಷ್ಯದಿಂದ  ಈ ಸಾವು ಸಂಭವಿಸಿದೆ~ ಎಂದು ಸ್ಥಳೀಯ ನಿವಾಸಿ ಅಶೋಕ ಬದ್ದಿ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.