ತುಮಕೂರು: ‘ಕಡಲೆಕಾಯಿ ನೆಲದ ಒಳಗೆ ಬೆಳೆಯುತ್ತೋ, ಗಿಡದ ಮೇಲೆ ಬೆಳೆಯುತ್ತೋ. ಮೆಣಸಿನಕಾಯಿ ಕೆಂಪಾಗಿರುತ್ತೋ, ಹಸಿರಾಗಿರುತ್ತೋ ಎಂಬುದು ಗೊತ್ತಿಲ್ಲದವರೂ ಇಂದು ರೈತರ ಹಿತದ ಬಗ್ಗೆ ಜಪ ಮಾಡತೊಡಗಿದ್ದಾರೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಕುರಿತು ವ್ಯಂಗ್ಯವಾಡಿದರು.
ತುಮಕೂರಿನಲ್ಲಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿಜೆಪಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಅವರು ಮಾತನಾಡಿದರು.
‘ಕಲ್ಪತರು ನಾಡು, ತುಮಕೂರಿನ ಜನತೆಗೆ ನನ್ನ ನಮಸ್ಕಾರಗಳು. ನಡೆದಾಡುವ ದೇವರು ಸಿದ್ದಗಂಗಾ ಸ್ವಾಮೀಜಿಗಳಿಗೆ ಭಕ್ತಿಪೂರ್ವಕ ಪ್ರಣಾಮಗಳು. ಈ ಮಣ್ಣಿನಲ್ಲಿ ಜನಿಸಿದ ಎಲ್ಲ ಮಹನೀಯರಿಗೆ ನನ್ನ ಪ್ರಣಾಮಗಳು’ ಎಂದು ಕನ್ನಡದಲ್ಲಿ ಮಾತನಾಡಿದ ಅವರು, ‘ಪೊಕ್ರಾನ್ ಅಣುಶಕ್ತಿ ಪರೀಕ್ಷೆಯಲ್ಲಿ ಪ್ರಮುಖ ಪಾತ್ರವಹಿಸಿದ ಡಾ. ರಾಜಾರಾಮಣ್ಣ ಇಲ್ಲಿನವರು. ಗುಬ್ಬಿ ವೀರಣ್ಣ, ಜಕಣಾಚಾರಿ ಇಲ್ಲಿನವರು. ಇವರ ಬಗ್ಗೆ ಹೆಮ್ಮ ಇದೆ’ ಎಂದು ಸ್ಮರಿಸಿದರು.
‘ಧಾರ್ಮಿಕ ಕಾರ್ಯಗಳ ಜತೆಗೆ ಶಿಕ್ಷಣ, ಸಾಮಾಜಿಕ ಕಾರ್ಯಗಳಲ್ಲಿ ಇಲ್ಲಿನ ಮಠ–ಮಂದಿರಗಳು, ಸಂತರು ತೊಡಗಿಸಿಕೊಂಡಿದ್ದಾರೆ. ಇದು ಇಡೀ ದೇಶಕ್ಕೇ ಮಾದರಿ’ ಎಂದು ಶಭಾಸ್ಗಿರಿ ನೀಡಿದರು.
‘ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸಮಯದಿಂದಲೂ ಬಡತನದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬರುತ್ತಿದ್ದ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದ ನಂತರ ಜನರ ಎದುರಿನಿಂದ ಮಾಯವಾಗುತ್ತಿತ್ತು. ಬಡ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ವ್ಯಕ್ತಿ ದೇಶದ ಪ್ರಧಾನಿಯಾದ ಮೇಲೆ ಬಡತನದ ಜಪ ಬಿಟ್ಟ ಕಾಂಗ್ರೆಸ್. ಬಡತನ ಮರೆಯಾಗುತ್ತದೆ ಎಂಬ ಕಾಂಗ್ರೆಸ್ಗೆ ಅರಿವಾಯಿತು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.