ವಿಟ್ಲ: ಬಂಟ್ವಾಳ ತಾಲ್ಲೂಕಿನ ಕನ್ಯಾನ ಗ್ರಾಮದ ಕೆಲವು ಮನೆಗಳಲ್ಲಿ ಹಿಂದುಗಳ ಮನೆಯಲ್ಲಿ ಕಾಂಗ್ರೆಸಿಗರಿಗೆ ಪ್ರವೇಶವಿಲ್ಲ ಎಂದು ಹಾಕಿದ ಭಿತ್ತಿ ಪತ್ರ ವಿಚಾರವಾಗಿ ಸೋಮವಾರ ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳ ತಂಡ ಹಾಗೂ ವಿಟ್ಲ ಪೊಲೀಸರ ತಂಡಗಳು ಮನೆ ಮನೆ ಭೇಟಿ ನೀಡಿ ತನಿಖೆ ಆರಂಭಿಸಿವೆ.
ಫಲಕ ವಿಚಾರ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ಎಷ್ಟು ಮನೆಗಳಲ್ಲಿ ಇಂತಹ ಫಲಕ ಇದೆ ಎಂಬ ಲೆಕ್ಕಾಚಾರಕ್ಕೆ ಕಾಂಗ್ರೆಸ್ ಇಳಿದಿದೆ. ಇದರ ಜತೆಗೆ ಕೆಲವು ಕಡೆಗಳಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ದೂರು ಕೊಟ್ಟು, ಫಲಕ ಹಾಕಿದ ಮನೆಗಳ ಮಹಜರು ನಡೆಸುವ ಪ್ರಕ್ರಿಯೆಯೂ ನಡೆಯುತ್ತಿದೆ.
ಭಿತ್ತಿಪತ್ರ: ‘ಇದು ಹಿಂದು ಮನೆ.. ಗಣ್ಯಶ್ರೀಯನ್ನು ಕಪಟ ಪ್ರೇಮದಿಂದ ಮತಾಂತರ ಮಾಡಲು ಬೆಂಬಲಿಸಿದ ಕಾಂಗ್ರೆಸಿಗರಿಗೆ ಇಲ್ಲಿ ಪ್ರವೇಶವಿಲ್ಲ.. ನಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ..' ಎಂದು ಬರೆದ ಫಲಕಗಳು ಹಲವು ಮನೆಯಲ್ಲಿ ಅಧಿಕಾರಿಗಳಿಗೆ ಪತ್ತೆಯಾಗಿದ್ದು, ಫಲಕ ಅಂಟಿಸಿದ ಬಗ್ಗೆ ಮನೆ ಮಂದಿಯಿಂದ ಹೇಳಿಕೆ ಪಡೆದು ಮಹಜರು ನಡೆಸಿದ್ದಾರೆ.
ಕೆಲವು ಭಾಗದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಫಲಕಗಳನ್ನು ತೆರವು ಮಾಡಿದ್ದಾರೆ. ಖಾಸಗಿ ಜಾಗದಲ್ಲಿರುವ ಮನೆಗಳ ಬಾಗಿಲಿಗೆ ಅಂಟಿಸಿದ ಕಾಗದವನ್ನು ತೆಗೆಸಿದ ಅಧಿಕಾರಿಗಳ ನಡೆ ಕೆಲವು ಹಿಂದೂ ಮುಖಂಡರ ಆಕ್ರೋಶಕ್ಕೂ ಕಾರಣವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.