ಬೆಂಗಳೂರು: ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರದಡಿಯಲ್ಲಿ ಬೆಂಗಳೂರಿನ ಮೆಟ್ರೊ ನಿಲ್ದಾಣಗಳಲ್ಲಿ ಹಿಂದಿ ಭಾಷೆಯ ಹೇರಿಕೆಯನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯ ವ್ಯಾಪ್ತಿಗೆ ಈಗ ಆಂಗ್ಲ ಭಾಷೆಯೂ ಸೇರ್ಪಡೆಯಾಗಿದ್ದು, ಹೋರಾಟ ತಿರುವು ಪಡೆದುಕೊಂಡಿದೆ.
ಗುರುವಾರ ಪ್ರತಿಭಟನೆ ನಡೆಸಿರುವ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಕಾರ್ಯಕರ್ತರು, ಬೆಂಗಳೂರಿನ ಇಕೋ ಟೆಕ್ ಸಮೀಪದ ಕೆಲ ರೆಸ್ಟೋರೆಂಟ್ ಹಾಗೂ ಮಾಲ್ಗಳಲ್ಲಿ ಹಿಂದಿ ಹಾಗೂ ಆಂಗ್ಲ ಭಾಷೆ ಬಳಕೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರವೀಣ್ ಶೆಟ್ಟಿ ಅವರು, ‘ಕಂಪೆನಿಗಳು ಇಲ್ಲಿನ ಸಂಪನ್ಮೂಲವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ. ಆದರೆ, ತಮ್ಮ ಕೆಲಸಕ್ಕಾಗಿ ಕನ್ನಡ ಬಳಸುವುದಿಲ್ಲ. ಕನ್ನಡಿಗರಿಗೆ ಉದ್ಯೋಗವನ್ನು ಸಹ ನೀಡುವುದಿಲ್ಲ. ಹಾಗಾಗಿಯೇ ನಾವು ಹೋರಾಟ ನಡೆಸುತ್ತಿದ್ದೇವೆ’ ಎಂದು ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕರ್ನಾಟಕದಲ್ಲಿ ಹಿಂದಿ ಹಾಗೂ ಆಂಗ್ಲ ಭಾಷೆಯನ್ನು ಬಳಸುವುದಾದರೆ ಬೇರೆ ಕಡೆಗಳಲ್ಲೂ ಕನ್ನಡ ಬಳಸಲಿ ಎಂದು ಸಹ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.