ಬೆಂಗಳೂರು: ಆತ್ಮ ಗೌರವ, ಸ್ವಾಭಿಮಾನ, ಜತೆಗೆ ಹಿರಿತನ ಬಹಳ ಅಮೂಲ್ಯವಾದುದು. ತಲೆಮಾರು ಬದಲಾಗಬಹುದು, ಆದರೆ ಮೌಲ್ಯಗಳು ಬದಲಾಗುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಹಿರಿತನ, ಆತ್ಮಗೌರವಕ್ಕೆ ಬೆಲೆ ಕಾಣಿಸದೆ ಇದ್ದುದರಿಂದ ಪಕ್ಷ ತ್ಯಜಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಎಂ. ಕೃಷ್ಣ ಭಾನುವಾರ ತಿಳಿಸಿದರು.
ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ತುರ್ತು ಪತ್ರಿಕಾ ಗೋಷ್ಠಿ ನಡೆಸಿ ‘ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುತ್ತಿದ್ದೇನೆ’ ಎಂದು ಎಸ್. ಎಂ. ಕೃಷ್ಣ ಅಧಿಕೃತವಾಗಿ ಘೋಷಣೆ ಮಾಡಿದರು.
ಪಕ್ಷಕ್ಕೆ ರಾಜೀನಾಮೆ ಕೊಟ್ಟ ಬಳಿಕ ನನ್ನ ಜತೆ ಕೆಲಸ ಮಾಡಿದವರು ಪುನರ್ ಪರಶೀಲಿಸಿ ಎಂದು ಮಾತನಾಡಿದ್ದಾರೆ. ದೆಹಲಿಯಿಂದಲೂ ಕರೆ ಬಂದಿತ್ತು, ಅವರಿಗೂ ಋಣಿಯಾಗಿದ್ದೇನೆ. ದಿಲ್ಲಿಯವರು ಕರೆ ಮಾಡಿದಾಗ ಅವರಿಗೆ ನಾನಿನ್ನೂ ಇದ್ದಿನಿ ಎಂಬುದನ್ನು ಜ್ಞಾಪಿಸಿದೆ ಎಂದರು.
ಆತ್ಮಗೌರವ, ಸ್ವಾಭಿಮಾನ ಜೀವನದಲ್ಲಿ ಮುಖ್ಯ. ಅದಕ್ಕೆ ಧಕ್ಕೆ ಬಂದಾಗ ನಾನು ಅಲ್ಲಿರುವುದಿಲ್ಲ ಎಂದು ಕೃಷ್ಣ ನುಡಿದರು.
46 ವರ್ಷಗಳಿಂದ ಇದ್ದ ಸ್ವಂತ ಮನೆಯನ್ನು ಬಿಟ್ಟು ಹೋಗುವಾಗ ಸಹಜವಾಗಿ ನೋವಾಗುತ್ತಿದೆ. ವಯಸ್ಸಿನ ಕಾರಣ ಮುಂದಿಟ್ಟು ಕೊಂಡು ಒಬ್ಬ ನಿಷ್ಠಾವಂತ ಕಾಂಗ್ರೆಸ್ ಕಾರ್ಯ ಕರ್ತನನ್ನು ಸೈಡ್ ಲೈನ್ ಮಾಡುವಂತದ್ದು ಎಷ್ಟು ಸೂಕ್ತ ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿದೆ ಎಂದು ಕೃಷ್ಣ ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.