ದಾವಣಗೆರೆ: ಕೆಪಿಸಿಸಿಗೆ ಇಬ್ಬಿಬ್ಬರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿರುವ ಕಾಂಗ್ರೆಸ್, ಜಾತಿ ಓಲೈಕೆಗೆ ಮುಂದಾಗಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ದೂರಿದರು.
ಬ್ರಾಹ್ಮಣ, ಲಿಂಗಾಯತ, ಕುರುಬ, ವಾಲ್ಮೀಕಿ, ಒಕ್ಕಲಿಗ, ಎಡಗೈ, ಬಲಗೈ... ಹೀಗೆ ಒಂದೊಂದು ಜಾತಿಯವರಿಗೂ ಕಾಂಗ್ರೆಸ್ ಪದಾಧಿಕಾರಿಗಳ ಸ್ಥಾನ ನೀಡಲಾಗಿದೆ. ಆದರೆ, ಅಲ್ಪಸಂಖ್ಯಾತರಿಗೆ ಯಾವ ಸ್ಥಾನವನ್ನೂ ನೀಡಿಲ್ಲ. ಆ ಸಮುದಾಯವನ್ನು ಮರೆತಿರುವ ಕಾಂಗ್ರೆಸ್, ಸಮಾಜವನ್ನು ಛಿದ್ರ ಮಾಡುತ್ತಿದೆ. ಆಡಳಿತದಲ್ಲಿರುವ ಪಕ್ಷಕ್ಕೆ ಇಂತಹ ದುಃಸ್ಥಿತಿ ಬರಬಾರದಿತ್ತು ಎಂದು ಟೀಕಿಸಿದರು.
ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಚಿಂತಿಸುತ್ತಿರುವ ಸರ್ಕಾರವೇ ಮಳೆಗಾಗಿ ಪರ್ಜನ್ಯ ಹೋಮ ನಡೆಸಲು ಮುಂದಾಗಿದೆ’ ಎಂದು ವ್ಯಂಗ್ಯವಾಡಿದರು.
ಸಭಾಪತಿ ಪದಚ್ಯುತಿಗೆ ಹುನ್ನಾರ: ಸಚಿವ ಸಂಪುಟದಿಂದ ಕೈಬಿಡುವಾಗ ಎಸ್.ಆರ್.ಪಾಟೀಲ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಹೀಗಾಗಿ, ಪಾಟೀಲರನ್ನು ಸಭಾಪತಿ ಸ್ಥಾನದಲ್ಲಿ ಕೂರಿಸಲು ಕಾಂಗ್ರೆಸ್ ಮುಖಂಡರು ಹುನ್ನಾರ ನಡೆಸಿದ್ದಾರೆ. ಅವಿಶ್ವಾಸ ನಿರ್ಣಯಕ್ಕೆ ಅವಕಾಶ ಕೋರಿ ವಿಧಾನಪರಿಷತ್ನ ಕಾಂಗ್ರೆಸ್ ಸದಸ್ಯರು ನೋಟಿಸ್ ನೀಡಿದ್ದಾರೆ. ಪಕ್ಷದೊಳಗಿನ ಭಿನ್ನಮತ ಬಗೆಹರಿಸುವ ಭರದಲ್ಲಿ ಸಭಾಪತಿ ಸ್ಥಾನಕ್ಕೇ ಅಗೌರವ ತೋರುತ್ತಿದ್ದಾರೆ ಎಂದು ಈಶ್ವರಪ್ಪ ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.