ಕೊಪ್ಪ: ತಾಲ್ಲೂಕಿನ ಮರಿತೊಟ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊದಲಮನೆ ಗುಡ್ಡ ಮತ್ತು ಹುಲುಗಾರು ಗುಡ್ಡಗಳಲ್ಲಿ ಭಾನುವಾರ ಕಾಳ್ಗಿಚ್ಚು ಕಾಣಿಸಿಕೊಂಡು ನೂರಾರು ಎಕರೆ ಕಾಡು ಭಸ್ಮವಾಗಿದೆ.
ಶನಿವಾರ ರಾತ್ರಿಯೇ ಹುಲುಗಾರು ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಊರ ಮಧ್ಯದ ಕಾಡಿಗೆ ತಗುಲಿದ ಬೆಂಕಿ ಕಳಸಾಪುರ, ಜಂಕ್ಷನ್, ಜಾರ್ಕಲ್, ನೇತ್ರಕಲ್ ಎಸ್ಟೇಟ್ ಭಾಗಕ್ಕೆ ಹರಡಿದೆ. ಬೆಂಕಿ ನಂದಿಸಲು ಗ್ರಾಮಸ್ಥರು ಹರಸಾಹಸ ನಡೆಸಿದರೂ ಸಾಧ್ಯವಾಗಲಿಲ್ಲ. ಅಗ್ನಿಶಾಮಕ ವಾಹನ ಬರಲು ಸೂಕ್ತ ದಾರಿಯಿಲ್ಲದ ಕಾರಣ ಬೆಂಕಿ ನಂದಿಸುವ ಕಾರ್ಯಕ್ಕೆ ತೊಡಕಾಯಿತು. ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಭಾನುವಾರ ಸಂಜೆವರೆಗೂ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.
ಕೊಪ್ಪ-ಚಿಕ್ಕಮಗಳೂರು ರಸ್ತೆಯ ಸೂರ್ಯಾಸ್ತಮಾನ ವೀಕ್ಷಣಾ ಗೋಪುರದ ಸಮೀಪ ಮೊದಲಮನೆ ಗುಡ್ಡದಲ್ಲಿ ಭಾನುವಾರ ಬೆಂಕಿ ಹತ್ತಿದ್ದನ್ನು ರಸ್ತೆಯಲ್ಲಿ ಸಾಗುತ್ತಿದ್ದ ಪ್ರಯಾಣಿಕರು ಕಂಡು, ತಮ್ಮ ವಾಹನಗಳನ್ನು ನಿಲ್ಲಿಸಿ ಬೆಂಕಿ ನಂದಿಸಲು ಮುಂದಾದರು. ಸುದ್ದಿ ತಿಳಿದ ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಬಂದು ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿ ನಂದಿಸಲು ಮುಂದಾದರು. ಆದರೆ ಅಷ್ಟರಲ್ಲಾಗಲೇ 15 ಎಕರೆಯಷ್ಟು ಕಾಡು ಸುಟ್ಟು ಭಸ್ಮವಾಗಿತ್ತು.
ಅಗ್ನಿ ದುರಂತದಲ್ಲಿ ವನ್ಯಪ್ರಾಣಿಗಳು, ಅಮೂಲ್ಯ ವೃಕ್ಷ ಸಂಪತ್ತು ನಾಶವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.