ADVERTISEMENT

ಕೃಷಿ ಬಜೆಟ್: ರಾಜಕೀಯ ಗಿಮಿಕ್-ತಾರಾದೇವಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 17:00 IST
Last Updated 1 ಫೆಬ್ರುವರಿ 2011, 17:00 IST

ಬೆಂಗಳೂರು: ‘ಯಾವುದೇ ಪೂರ್ವಸಿದ್ಧತೆ ನಡೆಸದೆ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಂದಾಗಿರುವುದು ರಾಜಕೀಯ ಗಿಮಿಕ್’ ಎಂದು ಕಾಂಗ್ರೆಸ್ ವಕ್ತಾರರಾದ ಡಿ.ಕೆ. ತಾರಾದೇವಿ ಟೀಕಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಕೃಷಿಗೆ ಪ್ರತ್ಯೇಕವಾಗಿ ಬಜೆಟ್ ಮಂಡಿಸಲು ಸಾಕಷ್ಟು ಪೂರ್ವಸಿದ್ಧತೆ ಬೇಕಾಗುತ್ತದೆ. ಆದರೆ ಯಡಿಯೂರಪ್ಪ ಅವರು ಧಿಡೀರ್ ಆಗಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಲು ಅನುವಾಗಿದ್ದಾರೆ. ಈ ನಡೆ ರಾಜಕೀಯ ದುರುದ್ದೇಶದಿಂದ ಕೂಡಿದೆ’ ಎಂದರು.

ಯಡಿಯೂರಪ್ಪ ಸರ್ಕಾರಕ್ಕೆ ಕೃಷಿ ನೀತಿ ಎಂಬುದೇ ಇಲ್ಲ ಎಂದು ಟೀಕಿಸಿದ ಅವರು, ‘ಬೇರೆ ಖಾತೆಗಳ ಹಣವನ್ನು ಕೃಷಿಗೆ ವರ್ಗಾಯಿಸಿ, ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಿದ ರಾಜ್ಯದ ಮೊದಲ ಮುಖ್ಯಮಂತ್ರಿ ತಾವೇ ಎಂಬ ಹೆಗ್ಗಳಿಕೆ ಪಡೆಯಲು ಅವರು ಹವಣಿಸುತ್ತಿದ್ದಾರೆ’ ಎಂದರು.

‘ಈ ಸರ್ಕಾರಕ್ಕೆ ರೈತಪರ ಕಾಳಜಿ ಇಲ್ಲ. ರೈತರಿಂದ ಭೂಮಿ ಕಬಳಿಸುವುದನ್ನು ಕೈಬಿಡಬೇಕು, ರೈತರಿಗಾಗಿಯೇ ಯಾವ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.