ADVERTISEMENT

ಕೃಷ್ಣ, ಧರ್ಮಸಿಂಗ್ ಅವಧಿಯಲ್ಲೇ ಅಕ್ರಮ ಗಣಿಗಾರಿಕೆ ಆರಂಭ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಮತ್ತು ಧರ್ಮಸಿಂಗ್ ಅವರೇ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಅದಿರು ರಫ್ತಿಗೆ ಅಡಿಪಾಯ ಹಾಕಿದವರು ಎಂಬುದಕ್ಕೆ ದಾಖಲೆಗಳು ಲಭ್ಯವಾಗಿವೆ ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಹಿರಿಯ ಸಲಹೆಗಾರ ಎಸ್.ಆರ್.ಹಿರೇಮಠ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಕೃಷ್ಣ ಅವರ ಅವಧಿಯಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡುವ ಮತ್ತು ಸಾರ್ವಜನಿಕ ಆಸ್ತಿಯನ್ನು ಖಾಸಗಿ ವ್ಯಕ್ತಿಗಳ ಒಡೆತನಕ್ಕೆ ನೀಡುವ ಪರಿಪಾಠ ಆರಂಭವಾಯಿತು. ನಂತರದ ಮುಖ್ಯಮಂತ್ರಿಗಳ ಅವಧಿಯಲ್ಲಿ ಈ ಅಕ್ರಮವು ದೊಡ್ಡ ಪ್ರಮಾಣದಲ್ಲಿ ನಡೆಯಿತು~ ಎಂದು ದೂರಿದರು.

ಕೃಷ್ಣ ಅವರ ಆಡಳಿತದ ಅವಧಿಯಲ್ಲಿ ರಾಜಕೀಯ ವ್ಯಕ್ತಿಗಳ ಶಿಫಾರಸು ಆಧರಿಸಿ ಅದಿರು ರಫ್ತಿಗೆ ಅನುಮತಿ ನೀಡಲಾಯಿತು. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್.ಯಡಿಯೂರಪ್ಪ, ಆಗಿನ ಸಚಿವ ಡಿ.ಕೆ.ಶಿವಕುಮಾರ್, ಆಗ ಜನತಾದಳ ನಾಯಕರಾಗಿದ್ದ ಸಿದ್ದರಾಮಯ್ಯ, ಆಗಿನ ಸಚಿವ ಎಚ್.ವಿಶ್ವನಾಥ್ ಅವರ ಶಿಫಾರಸು ಪತ್ರದ ಆಧಾರದಲ್ಲಿ ವಿಕ್ಟರಿ ಎಕ್ಸ್‌ಪೋರ್ಟ್ಸ್, ಇಂಡಿಯನ್ ರಾಕ್ ಮತ್ತಿತರ ಕಂಪೆನಿಗಳಿಗೆ ಅದಿರು ಮಂಜೂರು ಮಾಡಿರುವ ಬಗ್ಗೆ ದಾಖಲೆಗಳು ದೊರೆತಿವೆ ಎಂದರು. `ಅಂದು ಗಣಿ ಖಾತೆಯ ಸಚಿವರಾಗಿದ್ದ ವಿ.ಮುನಿಯಪ್ಪ ಅವರು ಮುಖ್ಯಮಂತ್ರಿಯವರ ಖಾಸಗಿ ಕಾರ್ಯದರ್ಶಿಯ ಪತ್ರದ ಆಧಾರದಲ್ಲಿ ಮೈಸೂರು ಮಿನರಲ್ಸ್‌ನ ಅದಿರನ್ನು ಖಾಸಗಿ ಕಂಪೆನಿಗಳಿಗೆ ಮಾರಲು ಅನುಮತಿ ನೀಡಿದ್ದರು. ಉತ್ತಮ ದರ್ಜೆಯ ಕಬ್ಬಿಣದ ಅದಿರಿಗೆ ಪ್ರತಿ ಟನ್‌ಗೆ  ರೂ 25ರಿಂದ ರೂ 226ರ ದರದಲ್ಲಿ ಮಾರಾಟ ಮಾಡಲಾಗಿತ್ತು. ಆದರೆ ಆಗ ಮಾರುಕಟ್ಟೆಯಲ್ಲಿ ಪ್ರತಿ ಟನ್ ಅದಿರಿಗೆ ರೂ 2,200 ದರ ಇತ್ತು. ಈ ಅಕ್ರಮದಿಂದ ರಾಜ್ಯದ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ನಷ್ಟವಾಗಿದೆ~ ಎಂದು ಹಿರೇಮಠ ಆರೋಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.