ಬೆಂಗಳೂರು:ರಾಜ್ಯದ ವಿವಿಧೆಡೆ ಬುಧವಾರವೂ ಮಳೆಯಾಗಿದೆ. ಚಿತ್ರದುರ್ಗದ ಐತಿಹಾಸಿಕ ಸಿಹಿನೀರು ಹೊಂಡದ ಕೋಡಿಬಿದ್ದಿದೆ.
ಸಿಡಿಲು ಬಡಿದು ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಹೋಬಳಿಯ ಯು.ಹೊಸಳ್ಳಿ ಬಳಿಯ ಹೊಲದಲ್ಲಿ ಬುಧವಾರ ಸಿಡಿಲು ಬಡಿದು ಐವರು ಹಾಗೂ ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ಹೋಬಳಿ ಲಕ್ಕಿಹಳ್ಳಿಯಲ್ಲಿ ಬುಧವಾರ ಸಂಜೆ ಮುದ್ದಪ್ಪ (25) ಎಂಬುವವರು ಗಾಯಗೊಂಡಿದ್ದಾರೆ.
ಒಡೆದ ಕೆರೆ ಏರಿ: ಹರಪನಹಳ್ಳಿ ತಾಲ್ಲೂಕಿನ ಮಾಚಿಹಳ್ಳಿ ತಾಂಡಾದ ಕೆರೆ ಏರಿ ಒಡೆದು, 70 ಎಕರೆಗೂ ಹೆಚ್ಚು ಮೆಕ್ಕೆಜೋಳ ಬೆಳೆ ಹಾಳಾಗಿದೆ ಎಂದು ಅಂದಾಜಿಸಲಾಗಿದೆ.
ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ದಾವಣಗೆರೆ ತಾಲ್ಲೂಕಿನ ತುರ್ಚಘಟ್ಟ ಗ್ರಾಮದ ಕೆರೆ ಏರಿ ಸಹ ಒಡೆದಿದ್ದು, ಅಪಾರ ಪ್ರಮಾಣದ ನೀರು ಪೋಲಾಗಿದೆ. ಸುತ್ತಮುತ್ತಲಿನ ಹೊಲ–ಗದ್ದೆಗಳಿಗೆ ನೀರು ನುಗ್ಗಿದ್ದು, ಬೆಳೆಹಾನಿಯಾಗಿದೆ.
ಧಾರವಾಡ, ಗದಗ, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧೆಡೆ ಬುಧವಾರವೂ ಮಳೆ ಮುಂದುವರಿದಿದೆ. ಗದಗ, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಯ ಹಲವೆಡೆ, ಮಂಗಳವಾರ ತಡರಾತ್ರಿ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಹಲವರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಹಳ್ಳದಲ್ಲಿ ಅರಣ್ಯ ರಕ್ಷಕ ಸಾವು
ಸಿರಿಗೆರೆ (ಚಿತ್ರದುರ್ಗ ಜಿಲ್ಲೆ): ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ದೊಡ್ಡಿಗನಹಾಳ್ ಹೊಸಹಟ್ಟಿ ಗ್ರಾಮದ ಹಳ್ಳದಲ್ಲಿ ಅರಣ್ಯ ರಕ್ಷಕ ರಾಮದಾಸ್ (55) ಮೃತಪಟ್ಟಿದ್ದಾರೆ.
ಹೊಳಲ್ಕೆರೆ ರೇಂಜ್ನ ಡಿ.ಮೆದಕೇರಿಪುರದ ಕಾವಲುಗಾರಾಗಿ ಕೆಲಸ ಮಾಡುತ್ತಿದ್ದ ರಾಮದಾಸ್ ಮಂಗಳವಾರ ಸಂಜೆ ಕೆಲಸ ಮುಗಿಸಿ, ಮನೆಗೆ ಮರಳುವಾಗ ದೊಡ್ಡಿಗನಹಾಳ್ ಹೊಸಟ್ಟಿ ಹಳ್ಳವನ್ನು ದಾಟಲು ಹೋದರು. ಹಳ್ಳದಲ್ಲಿದ್ದ ಗಿಡ–ಗಂಟಿ, ಬಳ್ಳಿಗಳು ಕಾಲಿಗೆ ಸುತ್ತಿಕೊಂಡಿದ್ದರಿಂದ ಹಳ್ಳದಲ್ಲಿಯೇ ಸಿಲುಕಿ ಸಾವನ್ನಪ್ಪಿದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.