ADVERTISEMENT

ಕೊಳೆಗೇರಿ ನಿವಾಸಿಗಳಿಗೆ 20 ದಿನದೊಳಗೆ ಹಕ್ಕುಪತ್ರ: ಸಿಎಂ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ಶಿವಮೊಗ್ಗ: ರಾಜ್ಯದ ಎಲ್ಲಾ ಕೊಳೆಗೇರಿ ನಿವಾಸಿಗಳಿಗೆ ಮುಂದಿನ 20 ದಿನಗಳ ಒಳಗೆ ಹಕ್ಕುಪತ್ರ ನೀಡಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ತಿಳಿಸಿದರು.

ಇಲ್ಲಿನ ನಗರಸಭೆ ಆವರಣದಲ್ಲಿ ಬುಧವಾರ ನಗರಸಭೆ ಹಮ್ಮಿಕೊಂಡಿದ್ದ ಪೌರಸನ್ಮಾನ ಹಾಗೂ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮದಲ್ಲಿ ಪೌರಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಈ ಕುರಿತಂತೆ ಇನ್ನೆರಡು ದಿನಗಳಲ್ಲಿ ಸರ್ಕಾರಿ ಆದೇಶ ಹೊರಬೀಳುವುದು ಎಂದು ಹೇಳಿದರು.

ಯೋಜನೆ ಜಾರಿ: ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗರಿಕ ಸನ್ನದು ಜಾರಿಗೊಳಿಸಲು ಮುಂದಿನ ಸಚಿವ ಸಂಪುಟದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಶೀಘ್ರ ಕಡತ ವಿಲೇವಾರಿಗಾಗಿ ಮುಖ್ಯಮಂತ್ರಿ ಅವರ ಕಚೇರಿಯಲ್ಲಿ 24X7ಯೋಜನೆ ರೂಪಿಸಿದ್ದು, ಈ ಮೂಲಕ ತೊಂದರೆಗೊಳಗಾದ ನಾಗರಿಕರು ರಾಜ್ಯದ ಯಾವುದೇ ಭಾಗದಿಂದ ಸಂಪರ್ಕಿಸಿ ಸಮಸ್ಯೆ ತಿಳಿಸಿ ಪರಿಹಾರ ಕಂಡುಕೊಳ್ಳಬಹುದು ಎಂದರು.

ADVERTISEMENT

ಭೇಟಿ ಫಲಪ್ರದವಾಗುವ ವಿಶ್ವಾಸ: ರಾಜ್ಯದಲ್ಲಿ ಉಂಟಾದ ವಿದ್ಯುತ್ ಸಮಸ್ಯೆ ನಿವಾರಿಸಲು ಸಚಿವೆ ಶೋಭಾ ಕರಂದ್ಲಾಚೆ 2ದಿನಗಳ ದೆಹಲಿ ಪ್ರವಾಸ ಕೈಗೊಂಡಿದ್ದು, ಕೇಂದ್ರ ಕಲ್ಲಿದ್ದಲು ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸುವರು. ಈ ಭೇಟಿ ಫಲಪ್ರದವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿರುವ ಸಕ್ಕರೆ ಕೈಗಾರಿಕೆಗಳ ಪ್ರತಿನಿತ್ಯದ ವಿದ್ಯುತ್ ಉತ್ಪಾದನೆ 1ಸಾವಿರ ಮೆಗಾವಾಟ್ ಇದ್ದು, ಖರೀದಿಗೆ ಕೈಗಾರಿಕಾ ಮಾಲೀಕರ ಜೊತೆ ಮಾತುಕತೆ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದ ಸಕ್ಕರೆ ಕೈಗಾರಿಕೆಗಳು ಈಗಾಗಲೇ ಮಹಾರಾಷ್ಟ್ರಕ್ಕೆ ಪ್ರತಿ ಯೂನಿಟ್‌ಗೆ 4ರೂ 80ಪೈಸೆ ದರದಂತೆ ಮಾರಾಟ ಮಾಡುತ್ತಿದ್ದು, ರಾಜ್ಯಕ್ಕೆ ಸಹಕರಿಸುವ ನಿಟ್ಟಿನಲ್ಲಿ ದರದಲ್ಲಿ ಔದಾರ್ಯ ತೋರುವಂತೆ ಕೈಗಾರಿಕೆಗಳ ಜೊತೆ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಹಾಗಾಗಿ ಮುಂದಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಆಗಲಾರದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.