ADVERTISEMENT

ಕ್ಷಮೆ ಕೇಳಲಾರೆ: ಕೋ.ಚೆನ್ನಬಸಪ್ಪ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 19:30 IST
Last Updated 2 ಜನವರಿ 2014, 19:30 IST
ಹಿರಿಯ ಲೇಖಕ ಕೋ.ಚೆನ್ನ­ಬಸಪ್ಪ ಅವರು, ಚಳಿ ತಡೆಯಲು ಬೆಚ್ಚನೆಯ ಉಡುಪು ಧರಿಸಿ ಗುರು­ವಾರ  ಪ್ರೆಸ್‌ಕ್ಲಬ್‌ಗೆ ಬಂ­ದ ಕ್ಷಣ
ಹಿರಿಯ ಲೇಖಕ ಕೋ.ಚೆನ್ನ­ಬಸಪ್ಪ ಅವರು, ಚಳಿ ತಡೆಯಲು ಬೆಚ್ಚನೆಯ ಉಡುಪು ಧರಿಸಿ ಗುರು­ವಾರ ಪ್ರೆಸ್‌ಕ್ಲಬ್‌ಗೆ ಬಂ­ದ ಕ್ಷಣ   

ಬೆಂಗಳೂರು: ‘ಅಪ್ರತಿಮ ದೇಶಭಕ್ತ ಟಿಪ್ಪು ಸುಲ್ತಾನ್’ ಕೃತಿಯ ಬಗ್ಗೆ ಕೊಡವರಿಗೆ ಸಂಬಂಧವೇ ಇಲ್ಲದವರು ಪ್ರತಿಭಟನೆ ಮಾಡುತ್ತಿದ್ದು ಮಡಿಕೇರಿ ಸಾಹಿತ್ಯ ಸಮ್ಮೇಳನಕ್ಕೆ ಬಾರದಂತೆ ಬೆದರಿಕೆ ಹಾಕುತ್ತಿದ್ದಾರೆ. ನಾನು ಸಾಹಿತ್ಯ ಸಮ್ಮೇಳನಕ್ಕೆ   ಖಂಡಿತ­ವಾಗಿಯೂ ಹೋಗುತ್ತೇನೆ’ ಎಂದು  ಹಿರಿಯ ಲೇಖಕ ಕೋ.ಚೆನ್ನಬಸಪ್ಪ ಹೇಳಿದರು.

ಈ ಕೃತಿಯಲ್ಲಿ ‘ಕೊಡವರನ್ನು ವಿದೇಶಿಯರು’ ಎಂದು ಅವಮಾನಿಸ­ಲಾಗಿದೆ ಎಂದು ಆರೋಪಿಸಿ ಮಡಿಕೇರಿ­ಯಲ್ಲಿ ಇತ್ತೀಚೆಗೆ ಕೆಲವು ಸಂಘಟನೆ­ಗಳು ಪ್ರತಿಭಟನೆ ನಡೆಸಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಲು ಅವರು ಗುರು­ವಾರ ಪತ್ರಿಕಾಗೋಷ್ಠಿಯಲ್ಲಿ ಮಾತ­ನಾಡಿದರು.

‘ಚರಿತ್ರೆಯನ್ನು ಸಂಗ್ರಹಿಸಿಕೊಡುವ ಕೆಲಸ ಮಾಡಿದ್ದು ನ್ಯಾಯಾಧೀಶನಂತೆ ನಿಷ್ಪಕ್ಷಪಾತವಾಗಿ ಕೃತಿಯನ್ನು ಸಂಪಾ ದಿ­­ಸಿ­ದ್ದೇನೆ. ಹಿಂಪಡೆಯು­ವಂತಹ ಬರಹ­ವನ್ನು ನಾನು ಬರೆದೂ ಇಲ್ಲ, ಹಿಂಪಡೆಯುವುದೂ ಇಲ್ಲ’ ಎಂದರು.

ಗೆಜೆಟಿಯರ್‌ ಮಾಹಿತಿ: ಹಿರಿಯ ಬರಹಗಾರರ ಪ್ರೊ.ಜಿ.­ರಾಮಕೃಷ್ಣ ಮಾತನಾಡಿ, ‘ಕೊಡವರನ್ನು ಅವ­ಮಾನಿ­ಸುವಂತೆ  ಕೋ.ಚೆನ್ನಬಸಪ್ಪ ಅವರು ಕೃತಿಯಲ್ಲಿ ಏನನ್ನೂ ಬರೆದಿಲ್ಲ. ಮೈಸೂರು ಸಂಸ್ಥಾನದ ಗೆಜೆಟಿಯರ್‌­ನಲ್ಲಿ ನೀಡಲಾಗಿರುವ ಮಾಹಿತಿಗಳನ್ನು ಕೋ.ಚೆ  ಅನುವಾದಿಸಿದ್ದಾರೆ ಮತ್ತು ಅನುವಾದದ ಮೂಲವನ್ನೂ ಉಲ್ಲೇಖಿ­ಸಿದ್ದಾರೆ’ ಎಂದು ಸ್ಪಷ್ಟನೆ ನೀಡಿದರು.

‘ಕೊಡವರು ವಿದೇಶಿಯರು ಎಂಬ ಅಭಿಪ್ರಾಯವನ್ನು ಅವರು ಮಂಡಿಸಿಲ್ಲ. ಕೊಡವರು ಆರ್ಯರಿಗಿಂತಲೂ ಮೊದಲು ಬಂದವರು ಎಂದು ಅವರ ವೈಶಿಷ್ಟ್ಯವನ್ನು ಉಲ್ಲೇಖಿ­ಸಿದ್ದಾರೆ’ ಎಂದರು. ‘ಕೃತಿಯನ್ನು  ಓದದೆ, ಪರಿಶೀಲಿಸದೆ ತಪ್ಪಾಗಿ ಅರ್ಥೈಸುವುದರ ಮೂಲಕ  ಲೇಖಕರ ವಿರುದ್ಧ ಘೋಷಣೆ ಕೂಗ­ಲಾ­ಗುತ್ತಿದೆ. ಚರ್ಚೆಗೆ ಒಳಗಾಗ­ಬೇಕಾದ ಬರಹದ ವಿರುದ್ಧ ಪ್ರತಿ­ಭಟನೆ, ಮುಟ್ಟುಗೋಲು ಮುಂತಾದ ನಡೆಗಳು ಸ್ವಾಗತಾರ್ಹ­ವಲ್ಲ. ಸಾಹಿತ್ಯ­ವನ್ನು ಪೂರ್ವಾಗ್ರಹ­ವಿಲ್ಲದೆ ಓದು­ವಂತಹ ಸಂಸ್ಕೃತಿ ಕ್ಷೀಣಿಸುತ್ತಿದ್ದು ಬೌದ್ಧಿಕ ವಾತಾವರಣ ಕಲುಷಿತ­ಗೊಳ್ಳುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ತಪ್ಪು ಮಾಹಿತಿ ನೀಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ವಿದ್ವತ್ ವಲಯದಿಂದ ನಡೆಯುತ್ತಿದೆ. ಅದರ ಬದಲು ಕೃತಿಗೆ ಪ್ರತಿಕ್ರಿಯೆಯಾಗಿ ಮತ್ತೊಂದು ಕೃತಿ­ಯನ್ನು ರಚಿಸಲಿ. ಪುಸ್ತಕವನ್ನು ಪರಾ­ಮರ್ಶೆಗೆ ಒಳಪಡಿಸಿ ಸಾಹಿತ್ಯ ಸಮ್ಮೇಳ­ನವು ಶಾಂತಿಯುತ­ವಾಗಿ ನಡೆಯಲು ಎಲ್ಲರೂ ಸಹ­ಕರಿಸಬೇಕು’ ಎಂದರು.
ವಿಮರ್ಶಕ ಗೋಪಾಲರಾಯ, ‘ಚರಿತ್ರೆಯನ್ನು ದ್ವೇಷ ಬಿತ್ತುವ ಮೂಲಕ ಅರ್ಥ ಮಾಡಿಕೊಳ್ಳುವ ಅವಶ್ಯಕತೆ­ಯಿಲ್ಲ’ ಎಂದರು. ನವಕರ್ನಾ­ಟಕ ಪಬ್ಲಿಕೇಷನ್ಸ್   ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.­ರಾಜಾರಾಂ ಇದ್ದರು.

ಪ್ರತಿಭಟನೆ ಖಚಿತ
ಸರ್ಕಾರದಿಂದ ಅನುದಾನ ಪಡೆದು ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಕೋ. ಚೆನ್ನಬಸಪ್ಪ ಅವರಿಗೆ ಅವಕಾಶ ನೀಡುವುದನ್ನು ನಾನು ಖಂಡಿಸು­ತ್ತೇನೆ .

ಸರಿಯಾಗಿ ಸಂಶೋಧನೆ ನಡೆ­ಸದೆ ತಮಗೆ ಅನಿಸಿದ್ದನ್ನು ಬರೆದು ಒಂದು ಸಮುದಾಯವನ್ನು ಹೀಗ­ಳೆ­­ದಿರುವ ಕೋ.ಚೆ. ಅವರ ಧೋರಣೆಯ ವಿರುದ್ಧ ಪ್ರತಿಭಟನೆ ನಡೆಸುವುದು ಖಚಿತ.
– ಅಡ್ಡಂಡ ಕಾರ್ಯಪ್ಪ, (ರಂಗಕರ್ಮಿ ಮತ್ತು ಸಾಹಿತಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT