ADVERTISEMENT

ಗಣಿ ಹರಾಜು: ಸ್ಪಷ್ಟನೆ ಕೋರಲು ತೀರ್ಮಾನ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 19:30 IST
Last Updated 12 ಡಿಸೆಂಬರ್ 2013, 19:30 IST

ಬೆಂಗಳೂರು: ‘ಸಿ’ ವರ್ಗದ 51 ಗಣಿಗಳನ್ನು ಹರಾಜು ಮಾಡುವಾಗ ಬಿಡ್‌ದಾರರ ಅರ್ಹತೆ ನಿಗದಿ ಮಾಡುವ ಸಂಬಂಧ ಸುಪ್ರೀಂಕೋರ್ಟ್‌ನಿಂದ ಸ್ಪಷ್ಟನೆ ಕೋರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

‌‘ಇ–ಹರಾಜಿನ ಮೂಲಕ ‘ಸಿ’ ವರ್ಗದ ಗಣಿಗಳನ್ನು ಹರಾಜು ಮಾಡಬೇಕು. ಅತಿ ಹೆಚ್ಚು ದರ ನಮೂದಿಸುವ ಬಿಡ್‌ದಾರರಿಗೆ ಗಣಿ ಗುತ್ತಿಗೆ ನೀಡಬೇಕು. ಅದಿರು ಮಾರಾಟಗಾರರು ಮತ್ತು ರಫ್ತುದಾರರಿಗೆ ಗುತ್ತಿಗೆ ನೀಡಬಾರದು. ಕಬ್ಬಿಣ ಮತ್ತು ಉಕ್ಕು ಉತ್ಪಾದಿಸುವ ಅಂತಿಮ ಬಳಕೆದಾರರಿಗೆ ಗಣಿ ಗುತ್ತಿಗೆ ದೊರೆಯಬೇಕು’ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿತ್ತು.

‘ಸುಪ್ರೀಂಕೋರ್ಟ್‌ನ ತೀರ್ಪಿನಂತೆಯೇ ಹರಾಜು ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಆದರೆ, ತೀರ್ಪಿನಲ್ಲಿ ‘ಅಂತಿಮ ಬಳಕೆದಾರರು’ ಎಂಬ ಉಲ್ಲೇಖವಿದೆ. ಅದಿರಿನ ಅಂತಿಮ ಬಳಕೆದಾರರು ರಾಜ್ಯಕ್ಕೆ ಸೀಮಿತ ಆಗಿರಬೇಕೆ ಅಥವಾ ದೇಶದ ಎಲ್ಲ ರಾಜ್ಯಗಳ ಕಬ್ಬಿಣ ಮತ್ತು ಉಕ್ಕು ಉತ್ಪಾದಕರಿಗೂ ಅವಕಾಶ ನೀಡಬಹುದೇ ಎಂಬುದರ ಬಗ್ಗೆ ಸುಪ್ರೀಂಕೋರ್ಟ್‌ನಿಂದಲೇ ಸ್ಪಷ್ಟನೆ ಕೋರಲು ನಿರ್ಧರಿಸಲಾಗಿದೆ’ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಸಚಿವ ಸಂಪುಟ ಸಭೆಯ ಬಳಿಕ ಪತ್ರಕರ್ತರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.