ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ರಜೆಗಾಗಿ ತಾಲ್ಲೂಕಿನ ಚಿರ್ಚನಕಲ್ ಗ್ರಾಮಕ್ಕೆ ಬಂದಿದ್ದ ಯೋಧನೊಬ್ಬ ಬುಧವಾರ ಸ್ಥಳೀಯ ವ್ಯಕ್ತಿಗೆ ಪಿಸ್ತೂಲ್ ಗುರಿ ಇಟ್ಟು ಮೂರು ತಾಸು ಹಿಡಿದಿಟ್ಟುಕೊಂಡಿದ್ದಲ್ಲದೇ, ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದರಾದರೂ, ಗುರಿಯಾಗಿಸಿದ್ದ ವ್ಯಕ್ತಿಗೆ ಪ್ರಾಣಾಪಾಯವಾಗದಂತೆ ತಡೆಯಲು ಯೋಧ ಹೇಳಿದಂತೆ ಕೇಳಬೇಕಾಗಿ ಬಂತು. ತಾಸುಗಳವರೆಗೆ ಯೋಧನ ಅಟಾಟೋಪವನ್ನು ಅಸಹಾಯಕರಾಗಿ ಸಹಿಸಿಕೊಂಡ ಪೊಲೀಸರು ಕೊನೆಗೂ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಆತನಿಂದ ಪಿಸ್ತೂಲು, 49 ಸಜೀವ ಗುಂಡು ಹಾಗೂ ಗನ್ ಲೈಸೆನ್ಸ್ ವಶಪಡಿಸಿಕೊಂಡಿದ್ದಾರೆ.
ಮೇಘಾಲಯದಲ್ಲಿ ಭಾರತೀಯ ಸೇನೆಯ ಸಿಗ್ನಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ ಬೂದಿಹಾಳ (30) ಬಂಧಿತ ಯೋಧ.
ಘಟನೆ ವಿವರ: ಮಂಜುನಾಥ ಹಾಗೂ ಬಸವನ ಬಾಗೇವಾಡಿ ತಾಲ್ಲೂಕಿನ ಹೂವಿನ ಹಿಪ್ಪರಗಿಯಲ್ಲಿ ಮದ್ಯದ ಅಂಗಡಿ ಇಟ್ಟುಕೊಂಡಿರುವ ಎ.ರಾಮ
ಬಾಬು ಅವರಿಗೂ ಮೊದಲಿನಿಂದ ವೈಷಮ್ಯ ಇತ್ತು. 20 ದಿನಗಳ ಹಿಂದಷ್ಟೇ ಊರಿಗೆ ಬಂದಿದ್ದ ಮಂಜುನಾಥ, ಈ ಅವಧಿಯಲ್ಲಿ ಹಲವು ಬಾರಿ ರಾಮ ಬಾಬು ಜೊತೆ ವಾಗ್ವಾದ ನಡೆಸಿದ್ದ ಎನ್ನಲಾಗಿದೆ. ಇಂದಿನ ಘಟನೆ ಇದು ಗ್ರಾಮದಲ್ಲಿ ಆತಂಕ ಸೃಷ್ಟಿಗೆ ಕಾರಣವಾಯಿತು.
ಪಿಎಸ್ಐ ಗೋವಿಂದಗೌಡ ಪಾಟೀಲ ನೇತೃತ್ವದ ಪೊಲೀಸರ ತಂಡ ಸಕಾಲಕ್ಕೆ ಸ್ಥಳಕ್ಕೆ ಬಂದರೂ, ಪಿಸ್ತೂಲ್ ಹಿಡಿದ ಕಾರಣ ಮಂಜುನಾಥ ಹೇಳಿದಂತೆ ಅವರೂ ಕೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.