ಶಿರಸಿ: ತಾಲ್ಲೂಕಿನ ಉಲ್ಲಾಳದಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಒಂಟಿ ಹೆಣ್ಣಾನೆ ಶನಿವಾರ ಮೃತಪಟ್ಟಿದೆ. ಆನೆಯ ಕಳೇಬರವನ್ನು ಕಂಡ ಗ್ರಾಮಸ್ಥರು ಮರುಕಪಟ್ಟರು. ಅದಕ್ಕೆ ಪುಷ್ಪ, ಹಣ್ಣು– ಕಾಯಿ ಅರ್ಪಿಸಿ, ಅಂತಿಮ ನಮನ ಸಲ್ಲಿಸಿದರು.
‘ಅನಾರೋಗ್ಯದಿಂದ ಬಳಲುತ್ತಿದ್ದ ಆನೆಯ ದೃಷ್ಟಿ ಮಂದವಾಗಿತ್ತು. ಆನೆಯನ್ನು ಕಂಡಿರುವ ದಿನವೇ ಅರಣ್ಯ ಇಲಾಖೆಗೆ ವಿಷಯ ತಿಳಿಸಲಾಗಿತ್ತು. ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು, ಹೆಚ್ಚಿನ ಚಿಕಿತ್ಸೆಗೆ ಆನೆಯನ್ನು ಸಕ್ರೆಬೈಲ್ಗೆ ಕರೆದೊಯ್ಯಲು ತಾಂತ್ರಿಕ ಪ್ರಕ್ರಿಯೆ ನಡೆಸುತ್ತಿರುವುದಾಗಿ ಹೇಳಿದ್ದರು. ತಕ್ಷಣ ಚಿಕಿತ್ಸೆ ದೊರಕಿದ್ದರೆ, ಆನೆಯನ್ನು ಉಳಿಸಿಕೊಳ್ಳಬಹುದಿತ್ತು’ ಎಂದು ಸ್ಥಳೀಯ ರಾಘವೇಂದ್ರ ನಾಯ್ಕ ಪ್ರತಿಕ್ರಿಯಿಸಿದರು.
‘ಊರಿಗೆ ಬಂದ ಆನೆ ಸತ್ತಿದೆ, ಇದರಿಂದ ಊರಿಗೆ ಸಂಕಷ್ಟ ಬರಬಹುದು ಎಂಬ ನಂಬಿಕೆಯಿದೆ. ಅದಕ್ಕಾಗಿ ನಾವು ಮೃತಪಟ್ಟ ಆನೆಗೆ ಪೂಜೆ ಸಲ್ಲಿಸಿದ್ದೇವೆ’ ಎಂದು ಸ್ಥಳೀಯ ಲಕ್ಷ್ಮಿ ನಾಯ್ಕ ಹೇಳಿದರು.
‘ಆನೆಯ ಮರಣೋತ್ತರ ಪರೀಕ್ಷೆಯನ್ನು ಭಾನುವಾರ ನಡೆಸಿ, ನಂತರ ಅಂತ್ಯಸಂಸ್ಕಾರ ಮಾಡಲಾಗುತ್ತದೆ’ ಎಂದು ಡಿಸಿಎಫ್ ಎನ್.ಡಿ. ಸುದರ್ಶನ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.