ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ವೀರನಹೊಸಹಳ್ಳಿಗೆ ಸೇರಿದ ಸೊಳ್ಳೆಪುರ ವಲಯದ ಸಿ.ಪಿ.ಟಿ. 8 ಮತ್ತು 6ರ ಮಧ್ಯದಲ್ಲಿರುವ ಕಳ್ಳ ಬೇಟೆಗಾರರ ತಡೆ ಶಿಬಿರದ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ರಾತ್ರಿ ಹಾರಿಸಿದ ಗುಂಡು ತಗುಲಿ ಜಿ.ಎಂ.ಹಳ್ಳಿಯ ರಾಜು ನಾಯಕ ಎಂಬಾತ ಗಾಯಗೊಂಡಿದ್ದಾನೆ.
ಗಾಯಾಳುವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಟ್ಟೆಯ ಎಡಭಾಗದಲ್ಲಿದ್ದ ಗುಂಡನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ. ಶಸ್ತ್ರಚಿಕಿತ್ಸೆ ವೇಳೆ ಇಲಾಖೆ ಸಿಬ್ಬಂದಿ ರಕ್ತದಾನ ಮಾಡಿದ್ದಾರೆ.ರಾತ್ರಿ ಪಾಳಿಯಲ್ಲಿ ಸೊಳ್ಳೆಪುರ ಅರಣ್ಯ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಕಳ್ಳ ಬೇಟೆಗಾರರ ತಡೆ ಶಿಬಿರದ ಬಳಿ ಶಬ್ದ ಕೇಳಿಸಿತು. ಆಗ ಸಿಬ್ಬಂದಿ ಯಾವುದೋ ಕಾಡುಪ್ರಾಣಿ ಇರಬಹುದು ಎಂದು ಅತ್ತ ಗುಂಡು ಹಾರಿದರು.
ಇದರಿಂದ ರಾಜು ನಾಯಕ ಗಾಯಗೊಂಡ. ಈತನೊಂದಿಗೆ ಇದ್ದ ಮಂಚನಾಯಕ ಮತ್ತು ಗಣೇಶ್ ನಾಯಕ ಎಂಬುವವರನ್ನು ಬಂಧಿಸಲಾಗಿದೆ ಎಂದು ವೀರನಹೊಸಹಳ್ಳಿ ವಲಯ ಅರಣ್ಯಾಧಿಕಾರಿ ಕಿರಣ್ಕುಮಾರ್ ತಿಳಿಸಿದರು.ಕಾಡಿನ ಮಧ್ಯದಲ್ಲಿರ್ದುವ ಕಳ್ಳ ಬೇಟೆಗಾರರ ನಿಯಂತ್ರಣ ಕೊಠಡಿಯ ಹಳೆ ಕಟ್ಟಡ ಶಿಥಿಲಗೊಂಡಿದ್ದು, ಅದರ ಕಿಟಕಿ, ಬಾಗಿಲು ಕಳವು ಮಾಡಲು ಇವರು ಬಂದಿದ್ದರು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.