ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತು ಮೈಸೂರು ಜಿಲ್ಲೆಯಲ್ಲಿನ ಎಲ್ಲ ಗೃಹ ನಿರ್ಮಾಣ ಸಹಕಾರ ಸಂಘಗಳಲ್ಲಿನ ಆಡಳಿತಾತ್ಮಕ ದೋಷ ಮತ್ತು ಹಣಕಾಸು ವ್ಯವಹಾರಗಳ ಕುರಿತು ತನಿಖೆಗೆ ಆದೇಶ ನೀಡಲಾಗಿದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಬುಧವಾರ ಇಲ್ಲಿ ತಿಳಿಸಿದರು.
ಬೆಂಗಳೂರು ನಗರ ಜಿಲ್ಲೆಯಲ್ಲಿ 81 ಮತ್ತು ಮೈಸೂರು ಜಿಲ್ಲೆಯಲ್ಲಿ 31 ಗೃಹ ನಿರ್ಮಾಣ ಸಹಕಾರ ಸಂಘಗಳು ಇದ್ದು, ಅನೇಕ ಅಕ್ರಮಗಳ ಬಗ್ಗೆ ದೂರುಗಳು ಬಂದಿವೆ. ಹೀಗಾಗಿ ಸಮಗ್ರ ತನಿಖೆಗೆ ಆದೇಶ ನೀಡಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಸಹಕಾರ ಇಲಾಖೆ ಡೆಪ್ಯೂಟಿ ರಿಜಿಸ್ಟ್ರಾರ್, ಜಂಟಿ ರಿಜಿಸ್ಟ್ರಾರ್ ಮತ್ತು ಸಹಾಯಕ ರಿಜಿಸ್ಟ್ರಾರ್ಗಳ ನೇತೃತ್ವದಲ್ಲಿ ಈ ಎರಡೂ ಜಿಲ್ಲೆಗಳಲ್ಲಿ ತನಿಖೆ ನಡೆಯಲಿದ್ದು ಒಂದೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಸಹಕಾರ ಇಲಾಖೆ ಜತೆಗೆ ಲೆಕ್ಕಪರಿಶೋಧನಾ ಇಲಾಖೆಯಿಂದಲೂ ತನಿಖೆ ಮಾಡಿಸಲಾಗುವುದು. ಎರಡೂ ವರದಿಗಳು ಬಂದ ನಂತರ ಅಕ್ರಮ ಎಸಗಿದ ಸಹಕಾರ ಸಂಘಗಳನ್ನು ಸೂಪರ್ಸೀಡ್ ಮಾಡಲಾಗುವುದು. ನಿವೇಶನ ಹಂಚಿಕೆ ಸೇರಿದಂತೆ ಎಲ್ಲ ರೀತಿಯ ಅಕ್ರಮಗಳ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ಉತ್ತರಿಸಿದರು.
`ಸಚಿವಾಲಯ ನೌಕರರ ಗೃಹ ನಿರ್ಮಾಣ ಸಂಘದಲ್ಲಿ ಅಕ್ರಮ~
ಬೆಂಗಳೂರು: ನಗರದ ವೈಯಾಲಿಕಾವಲ್ ಮತ್ತು ವಿಧಾನಮಂಡಲ ಸಚಿವಾಲಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಅಕ್ರಮ ನಡೆದಿದ್ದು, ಅವುಗಳನ್ನು ಸೂಪರ್ಸೀಡ್ ಮಾಡಲು ಸಂಬಂಧಪಟ್ಟ ಆಡಳಿತ ಮಂಡಳಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ನ್ಯಾಯಾಂಗ ಬಡಾವಣೆ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿನ ಅಕ್ರಮಗಳ ಬಗ್ಗೆಯೂ ತನಿಖೆ ನಡೆದಿದ್ದು, ತನಿಖೆ ನಂತರ ಅದರ ಸೂಪರ್ಸೀಡ್ಗೂ ನೋಟಿಸ್ ಜಾರಿ ಮಾಡಲಾಗುವುದು ಎಂದು ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.