ADVERTISEMENT

ಗೃಹ ಸಚಿವ ಅಶೋಕ ಭೂ ಹಗರಣ: ಗುರುವಾರ ಲೋಕಾಯುಕ್ತ ತೀರ್ಪು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 12:35 IST
Last Updated 19 ಅಕ್ಟೋಬರ್ 2011, 12:35 IST
ಗೃಹ ಸಚಿವ ಅಶೋಕ ಭೂ ಹಗರಣ: ಗುರುವಾರ ಲೋಕಾಯುಕ್ತ ತೀರ್ಪು
ಗೃಹ ಸಚಿವ ಅಶೋಕ ಭೂ ಹಗರಣ: ಗುರುವಾರ ಲೋಕಾಯುಕ್ತ ತೀರ್ಪು   

ಬೆಂಗಳೂರು (ಪಿಟಿಐ): ಸರ್ಕಾರಿ ಭೂಮಿಯ ಅಕ್ರಮ ಡಿನೋಟಿಫಿಕೇಷನ್ ಮೂಲಕ ಗೃಹ ಸಚಿವ ಆರ್. ಅಶೋಕ ಅವರು ರಾಜ್ಯ ಬೊಕ್ಕಸಕ್ಕೆ ಅಂದಾಜು 50 ಕೋಟಿ ರೂಪಾಯಿಗಳ ನಷ್ಟ ಉಂಟು ಮಾಡಿದ್ದಾರೆಂದು ಆಪಾದಿಸಲಾಗಿರುವ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಖಾಸಗಿ ದೂರಿನ ಬಗ್ಗೆ ಲೋಕಾಯುಕ್ತ ನ್ಯಾಯಾಲಯ ಗುರುವಾರ ತನ್ನ ತೀರ್ಪು ನೀಡಲಿದೆ.

ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಅವರು ಬುಧವಾರ ವಾದ ಆಲಿಕೆಯ ಬಳಿಕ ಆದೇಶಕ್ಕಾಗಿ ಗುರುವಾರಕ್ಕೆ ದಿನ ನಿಗದಿಗೊಳಿಸಿದರು. ಜಯಕುಮಾರ್ ಹಿರೇಮಠ ಅವರು ಲೋಕಾಯುಕ್ತ ನ್ಯಾಯಾಲಯಕ್ಕೆ ಗೃಹ ಸಚಿವ ಅಶೋಕ ವಿರುದ್ಧ ಈ ದೂರು ಸಲ್ಲಿಸಿದ್ದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಅವರು ಈ ಪ್ರಕರಣಗಳಲ್ಲಿ ಎರಡನೇ ಆರೋಪಿಯಾಗಿದ್ದಾರೆ.

ಪ್ರಸ್ತುತ ಆರ್.ಎಂ.ವಿ. ಬಡಾವಣೆಯ ಎರಡನೇ ಹಂತದಲ್ಲಿರುವ ಲೊಟ್ಟೆಗೊಲ್ಲಹಳ್ಳಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ 9 ಎಕ್ರೆ 12 ಗುಂಟಾ ಮತ್ತು 14 ಗುಂಟಾ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟು ಮಾಡಿದ್ದಕ್ಕೆ ಸಂಬಂಧಿಸಿದ ಪ್ರಕರಣಗಳು ಇವು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಹಗರಣ ನಡೆದಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.