ಬಳ್ಳಾರಿ: ‘ಮುಂದಿನ ಯಾವುದೇ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ’ ಎಂದು ಬಿಜೆಪಿ ಮುಖಂಡ ಜಿ.ಜನಾರ್ದನರೆಡ್ಡಿ ಸ್ಪಷ್ಟಪಡಿಸಿದರು.
ತಮ್ಮ ಮದುವೆಯ 25ನೇ ವರ್ಷದ ಆಚರಣೆ ಸಲುವಾಗಿ ನಗರದ ಮನೆಗೆ ಬಂದಿರುವ ಅವರು, ಕನಕದುರ್ಗಮ್ಮ ಗುಡಿಗೆ ಗುರುವಾರ ಮಧ್ಯಾಹ್ನ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
‘ತಾಯಿ ದುರ್ಗಮ್ಮ ಸಮ್ಮುಖದಲ್ಲೇ ಈ ಮಾತನ್ನಾಡುತ್ತಿರುವೆ. ಯಾವುದೇ ಚುನಾವಣೆಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಸ್ಪರ್ಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದರು.
‘ಸ್ಪರ್ಧೆಯ ಕುರಿತು ನಿರ್ಧರಿಸಬೇಕಾದ್ದು ಪಕ್ಷ. ಆದರೆ ವೈಯಕ್ತಿಕವಾಗಿ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಪಕ್ಷ ನೀಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವೆ’ ಎಂದು ಹೇಳಿದರು.
‘ಬಿಜೆಪಿಯ ನೇತೃತ್ವ ವಹಿಸಿರುವ ಬಿ.ಎಸ್.ಯಡಿಯೂರಪ್ಪ ಅವರು 2018ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಬೇಕು. 2019ರಲ್ಲಿ ಇನ್ನೊಮ್ಮೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೆಚ್ಚು ಬಹುಮತದಿಂದ ಅಧಿಕಾರಕ್ಕೆ ಬರಬೇಕು ಎಂಬುದು ನನ್ನ ಕನಸು. ಅದಕ್ಕಾಗಿ ಕರ್ನಾಟಕ ಮಾತ್ರವಲ್ಲ, ನನಗೆ ಶಕ್ತಿ ಇರುವ ಆಂಧ್ರ ಪ್ರದೇಶ, ತೆಲಂಗಾಣದಲ್ಲೂ ಓಡಾಡಿ ಹೆಚ್ಚಿನ ಬಹುಮತ ಗಳಿಸಲು ಪ್ರಯತ್ನಿಸುವೆ’ ಎಂದರು.
ರೋಲ್ಸ್ರಾಯ್ಸ್ ಕಾರು: ದೇವಾಲಯಕ್ಕೆ ಅವರು ಹೂವಿನಿಂದ ಅಲಂಕರಿಸಿದ್ದ, ಕಪ್ಪುಬಣ್ಣದ ರೋಲ್ಸ್ ರಾಯ್ಸ್ ಕಾರಿನಲ್ಲಿ ಬಂದಿಳಿದರು. ಅಲ್ಲಿದ್ದ ಇತರ ಭಕ್ತರಿಗೆ ರೆಡ್ಡಿ ಅವರಷ್ಟೇ ಕಾರು ಕೂಡ ಕುತೂಹಲ ಹುಟ್ಟಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.