ಬನಹಟ್ಟಿ (ಬಾಗಲಕೋಟೆ ಜಿಲ್ಲೆ): ಮನೆಯ ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಸಮೀಪದ ರಬಕವಿ ಪಟ್ಟಣದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ. ನಾಗಪ್ಪ ಅರಬಳ್ಳಿ (45), ಇವರ ಹೆಂಡತಿ ದಾನಮ್ಮ (36), ಮಕ್ಕಳಾದ ಓಂಪ್ರಕಾಶ (8) ಮತ್ತು ಪ್ರಮೋದ (7) ಮೃತಪಟ್ಟಿದ್ದಾರೆ. ಇನ್ನೊಬ್ಬ ಮಗ ಪ್ರಸಾದ (12) ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ರಬಕವಿಯ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ವಾಸವಾಗಿದ್ದ ನಾಗಪ್ಪ ಅವರು ಔಟ್ಪೋಸ್ಟ್ ಪೊಲೀಸ್ ಠಾಣೆಯ ಬಳಿ ಭಜಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಬೆಳಗಿನ ಜಾವ 3.30ರ ಸುಮಾರಿಗೆ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಈ ದುರ್ಘಟನೆ ನಡೆದಿದೆ. ಮೇಲ್ಛಾವಣಿ ಕುಸಿಯುತ್ತಿರುವ ಸಪ್ಪಳವನ್ನು ಕೇಳಿ ಪ್ರಸಾದ್ ಎಚ್ಚೆತ್ತು ತನ್ನ ಕುಟುಂಬದವರನ್ನು ಎಬ್ಬಿಸುವಷ್ಟರಲ್ಲಿಯೇ ಈ ದುರಂತ ನಡೆದಿದೆ.
ಮೇಲ್ಛಾವಣೆ ಸಡಿಲಗೊಂಡಿದ್ದರಿಂದ 2009ರಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಯೆಂದು ಗುರುತಿಸಿ ಪರಿಹಾರ ನೀಡಲಾಗಿತ್ತು. ಆಗ ದುರಸ್ತಿ ಮಾಡಿಸಿಕೊಂಡಿದ್ದರೂ ಛಾವಣಿ ಕುಸಿದಿದೆ. ಈ ಮನೆಯು ಹಳೆಯ ಮತ್ತು ಮೇಲ್ಮುದ್ದಿಯ ಮನೆಯಾಗಿತ್ತು.
ಪರಿಹಾರ: ರಾಜ್ಯ ಸರ್ಕಾರದ ಮುಖ್ಯ ಸಚೇತಕ ಮತ್ತು ತೇರದಾಳ ಶಾಸಕ ಸಿದ್ದು ಸವದಿ ಅವರು ಮೃತರ ಕುಟುಂಬಕ್ಕೆ ಸರ್ಕಾರದಿಂದ ರೂ 1.5 ಲಕ್ಷ ಪರಿಹಾರ ಧನದ ಚೆಕ್ ವಿತರಣೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.