ADVERTISEMENT

ಜಗದೀಶ ಶೆಟ್ಟರ್ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 19:59 IST
Last Updated 17 ಏಪ್ರಿಲ್ 2013, 19:59 IST

ಹುಬ್ಬಳ್ಳಿ: `ಕಾಂಗ್ರೆಸ್ ಪಕ್ಷದಲ್ಲಿ ನಾಲ್ವರು ಮುಖ್ಯಮಂತ್ರಿ ಪಟ್ಟದ ನಿರೀಕ್ಷೆಯಲ್ಲಿ ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಕೆಲವರು ಖಾತೆಗಳನ್ನೂ ಹಂಚಿಕೊಂಡಿದ್ದಾರೆ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಲೇವಡಿ ಮಾಡಿದರು.

ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಅಖಾಡಾಕ್ಕೆ ಇಳಿದಿರುವ ಅವರು, ಬುಧವಾರ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.

`ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು 2-3 ದಿನದಲ್ಲಿ ಬಿಡುಗಡೆ ಮಾಡಲಾಗುವುದು. ಸಮಗ್ರ ಕರ್ನಾಟಕದ ಅಭಿವೃದ್ಧಿ ದೃಷ್ಟಿ ಇಟ್ಟುಕೊಂಡು ಪ್ರಣಾಳಿಕೆಗೆ ಒತ್ತು ನೀಡಲಾಗುವುದು' ಎಂದರು.

`ರಾಜ್ಯದಲ್ಲಿ ಬಿಜೆಪಿ ಅಲೆ ಇದೆ. ಸರ್ಕಾರದ ಸಾಧನೆ ಪರಿಗಣಿಸಿ ಜನ ಮತ್ತೆ ಪಕ್ಷವನ್ನು ಬೆಂಬಲಿಸಲಿದ್ದಾರೆ. ಬಿಜೆಪಿ ಬಹುಮತ ಪಡೆದು ಸರ್ಕಾರ ರಚನೆ ಮಾಡುವುದು ಖಚಿತ. ಹೀಗಾಗಿ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಕಾಂಗ್ರೆಸ್ಸಿಗೆ ಈ ಬಾರಿಯೂ ನಿರಾಶೆಯಾಗುವುದು ಖಚಿತ' ಎಂದು ಭವಿಷ್ಯ ನುಡಿದರು. ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ. ಪಕ್ಷ ನನ್ನನ್ನು ಸಿ.ಎಂ. ಎಂದು ಘೋಷಿಸಿದೆ. ಇದರಿಂದ ಉತ್ತರ ಕರ್ನಾಟಕ ಭಾಗದಲ್ಲಿ  ಪಕ್ಷಕ್ಕೆ ಉತ್ತಮ ಬೆಂಬಲ ಸಿಗಲಿದೆ' ಎಂದರು.

ಸ್ವಂತ ವಾಹನ ಇಲ್ಲದ ಸಿಎಂ
ಹುಬ್ಬಳ್ಳಿ:
ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಳಿ  ಎಷ್ಟು ಕಾರು ಇರಬಹುದು, ಎಷ್ಟು ದ್ವಿಚಕ್ರ ವಾಹನಗಳು ಇರಬಹುದು?ಒಂದು, ಎರಡು, ಮೂರು... ಊಹುಂ ನಿಮ್ಮ ಊಹೆ ತಪ್ಪು. ಅವರ ಬಳಿಯಾಗಲಿ, ಪತ್ನಿಯ ಬಳಿಯಾಗಲಿ ಒಂದೇ ಒಂದು ಕಾರಾಗಲಿ ಅಥವಾ ದ್ವಿಚಕ್ರ ವಾಹನವಾಗಲಿ ಇಲ್ಲ!

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿಯಾಗಿ ಬುಧವಾರ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಾವು ಯಾವುದೇ ವಾಹನವನ್ನು ಹೊಂದಿಲ್ಲ ಎಂದು  ತಿಳಿಸಿದ್ದಾರೆ.

ADVERTISEMENT

ಕೃಷಿಭೂಮಿ: 3 ಎಕರೆ  ಕೃಷಿಯೇತರ ಭೂಮಿ: ಕೇಶ್ವಾಪುರದಲ್ಲಿ ನಿವೇಶನ 1,383 ಚ.ಅಡಿ, ಬೆಂಗಳೂರಿನಲ್ಲಿ ಬಿಡಿಎ ನಿವೇಶನ 3,991 ಚ.ಅಡಿ 
ವಾಣಿಜ್ಯ ಕಟ್ಟಡ: ಅಪಾರ್ಟ್‌ಮೆಂಟ್-ದಾಜೀಬಾನ್ ಪೇಟೆ. 432.5 ಚ.ಅಡಿ  ವಿಸ್ತೀರ್ಣ
ವಸತಿ ಕಟ್ಟಡ: ಮಧುರಾ ಎಸ್ಟೇಟ್‌ನಲ್ಲಿ 2 ಮನೆ. ಆದಾಯ ತೆರಿಗೆ ಸಲ್ಲಿಕೆ (2012) ರೂ.1,46,650

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.