ಬೆಂಗಳೂರು: `ನಾನು ಎಂದೂ ಜಾತಿ ರಾಜಕಾರಣ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. `ಸಿದ್ದರಾಮಯ್ಯ ಅವರು ಒಕ್ಕಲಿಗ ವಿರೋಧಿ ಜಾತಿ ರಾಜಕಾರಣ ಮಾಡುತ್ತಿದ್ದಾರೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾಡಿದ್ದ ಆರೋಪಕ್ಕೆ ಸೋಮವಾರ ತಮ್ಮ ಗೃಹ ಕಚೇರಿ `ಕೃಷ್ಣಾ'ದಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, `ಯಾರು ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ರಾಜ್ಯದ ಜನತೆಗೆ ಗೊತ್ತು' ಎಂದು ತಿರುಗೇಟು ನೀಡಿದರು.
`ಯಾರೂ ಒಂದೇ ಜಾತಿಯ ಬಲದಿಂದ ರಾಜಕೀಯವಾಗಿ ಬೆಳೆಯಲು ಸಾಧ್ಯವಿಲ್ಲ. ಎಲ್ಲರೂ ಎಲ್ಲಾ ಜಾತಿಗಳ ಬೆಂಬಲದಿಂದಲೇ ಬೆಳೆಯಬೇಕು. ಎಲ್ಲಾ ಜಾತಿಯ ಜನರ ಬೆಂಬಲದಿಂದಲೇ ನಾನು ಬೆಳೆದು ಬಂದಿದ್ದೇನೆ. ಒಂದೇ ಜಾತಿಯ ಜನರು ನನ್ನನ್ನು ಬೆಳೆಸಿಲ್ಲ. ಕುಮಾರಸ್ವಾಮಿಯವರು ಅವರ ಮನೆಯಲ್ಲೇ ಇದ್ದು ಬೆಳೆಯಲಿಲ್ಲ.
ಎಲ್ಲಾ ಜಾತಿಯವರೂ ಬೆಂಬಲ ನೀಡಿದ್ದರಿಂದ ಬೆಳೆದಿದ್ದಾರೆ' ಎಂದರು. `ರಾಜ್ಯದಲ್ಲಿ ಯಾರು ಜಾತಿ ರಾಜಕಾರಣ ಮಾಡುತ್ತಾರೆ, ಯಾರು ಮಾಡುವುದಿಲ್ಲ ಎಂಬುದು ಜನರಿಗೆ ಗೊತ್ತಿದೆ. ಅದನ್ನು ಮೊದಲು ಕುಮಾರಸ್ವಾಮಿಯವರು ತಿಳಿದುಕೊಳ್ಳಬೇಕು. ನಂತರ ಜಾತಿ ರಾಜಕಾರಣದ ಬಗ್ಗೆ ಮಾತನಾಡಬೇಕು' ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.