ADVERTISEMENT

‘ಜಾನಪದ ಶ್ರೀ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST
ಪ್ರಶಸ್ತಿ ಪುರಸ್ಕೃತರಾದ ವೆಂಕಪ್ಪ ಪುಲಿ ಮತ್ತು ವೆಂಕಪ್ಪ ಅಂಬಾಜಿ ಸುಗತೇಕರ ಅವರನ್ನು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಕಾಳೇಗೌಡ ನಾಗವಾರ ಅಭಿನಂದಿಸಿದರು. ಜಾನಪದ ಅಕಾಡೆಮಿ ಅಧ್ಯಕ್ಷ ಟಾಕಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್‌.ಆರ್. ವಿಶುಕುಮಾರ್‌, ಉಮಾಶ್ರೀ ಇದ್ದರು –ಪ್ರಜಾವಾಣಿ ಚಿತ್ರ
ಪ್ರಶಸ್ತಿ ಪುರಸ್ಕೃತರಾದ ವೆಂಕಪ್ಪ ಪುಲಿ ಮತ್ತು ವೆಂಕಪ್ಪ ಅಂಬಾಜಿ ಸುಗತೇಕರ ಅವರನ್ನು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಕಾಳೇಗೌಡ ನಾಗವಾರ ಅಭಿನಂದಿಸಿದರು. ಜಾನಪದ ಅಕಾಡೆಮಿ ಅಧ್ಯಕ್ಷ ಟಾಕಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್‌.ಆರ್. ವಿಶುಕುಮಾರ್‌, ಉಮಾಶ್ರೀ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಗೊಂದಳಿ ಕಲೆಗಾರ ವೆಂಕಪ್ಪ ಅಂಬಾಜಿ ಸುಗತೇಕರ ಹಾಗೂ ಕರಡಿ ವಾದನ ಕಲಾವಿದ ವೆಂಕಪ್ಪ ಪುಲಿ ಅವರಿಗೆ ಶುಕ್ರವಾರ ಇಲ್ಲಿ 2017ನೇ ಸಾಲಿನ ‘ಜಾನಪದ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೆಂಕಪ್ಪ ಅಂಬಾಜಿ ಸುಗತೇಕರ, ‘ನನ್ನ ಅಪ್ಪನಿಂದ ಬಳುವಳಿಯಾಗಿ ಬಂದಿರುವ ಈ ಕಲೆಯಿಂದಲೇ ಕುಟುಂಬದ ನಿರ್ವಹಣೆಯಾಗುತ್ತಿದೆ. ಈ ಕಲೆಯೊಂದಿಗೆ ನಾವು ಬದುಕುತ್ತಿದ್ದೇವೆ. 60 ವರ್ಷಗಳಿಂದ ಈ ಕಲೆಯೊಂದಿಗೆ ನಡೆದುಬಂದಿದ್ದೇನೆ’ ಎಂದರು.

ಬಾಗಲಕೋಟೆಯವರಾದ ಇವರು ಮನೆಮನೆಗೆಹೋಗಿ ದಾಸರಪದ, ತತ್ವಪದ, ದೇವಿ ಪದ, ಪುರಂದರದಾಸ– ಕನಕದಾಸರ ಕೀರ್ತನೆಗಳು, ಶಿಶುನಾಳ ಶರೀಫರ ಪದಗಳು ಮತ್ತು ರಾಜರ ಕಥೆಗಳನ್ನು ಗಾಯನದ ರೂಪದಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ಗೊಂದಳಿ ಎನ್ನುವ ಅಲೆಮಾರಿ ಸಮುದಾಯದ ಕಲೆ ಇದಾಗಿದೆ.

ADVERTISEMENT

ಹುಬ್ಬಳ್ಳಿಯ ಗಿರಿಯಾಲದ ವೆಂಕಪ್ಪ ಪುಲಿ ಅವರು 13ನೇ ವಯಸ್ಸಿನಲ್ಲಿಯೇ ಗೆಳೆಯರ ಜೊತೆ ಸೇರಿ ಮೇಳ ಕಟ್ಟಿದ್ದರು.  ಅನೇಕ ವರ್ಷಗಳಿಂದ ಕರಡಿವಾದನವನ್ನು ಪ್ರದರ್ಶಿಸುತ್ತಿದ್ದಾರೆ. ‘ತಲೆಗೆ ಹಳದಿ ರುಮಾಲು, ನೆಹರೂ ಅಂಗಿ, ಬಿಳಿಯ ಪಂಚೆ, ನಡುಕಟ್ಟು, ಕಿರೀಟಧಾರಿಯಾಗಿ ಕರಡಿಮಜಲನ್ನು ಹೊತ್ತು ಈ ಕಲೆಯನ್ನು ಪ್ರದರ್ಶಿಸುತ್ತೇವೆ’ ಎಂದು ಕಲೆಯ ಕುರಿತು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ‘ಈ ಬಾರಿಯಿಂದ ಇಬ್ಬರಿಗೆ ಪ್ರಶಸ್ತಿ ನೀಡುತ್ತಿದ್ದೇವೆ. ಜನಪದ ಕಲಾವಿದರಲ್ಲಿ ಹೆಚ್ಚು ಬಡವರೇ ಇರುತ್ತಾರೆ. ಹಾಗಾಗಿ ಪ್ರಶಸ್ತಿಯ ಮೊತ್ತವನ್ನು ₹3 ಲಕ್ಷದಿಂದ ₹5 ಲಕ್ಷಕ್ಕೆ ಏರಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.