ಮೈಸೂರು/ಸರಗೂರು: ಎಚ್.ಡಿ. ಕೋಟೆ ತಾಲ್ಲೂಕಿನ ಜಕ್ಕಹಳ್ಳಿಯಲ್ಲಿ ಜಾನುವಾರು ಮೇಲೆ ದಾಳಿ ನಡೆಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಬೆಳಗಿನ ಜಾವ ಸೆರೆ ಹಿಡಿದಿದ್ದಾರೆ. ಮೂರು ದಿನಗಳಿಂದ ಸೃಷ್ಟಿಯಾಗಿದ್ದ ಆತಂಕದ ವಾತಾವರಣ ಇದರೊಂದಿಗೆ ದೂರವಾಗಿದೆ.
ಸರಗೂರು ಪಟ್ಟಣದಿಂದ 8 ಕಿ.ಮೀ. ದೂರದ ಜಕ್ಕಹಳ್ಳಿಯಲ್ಲಿ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಶನಿವಾರ ಕಾರ್ಯಾಚರಣೆ ಆರಂಭಿಸಿತ್ತು.
ಕಬ್ಬಿನ ಗದ್ದೆಗಳೇ ಹೆಚ್ಚಾಗಿರುವ ಅರಣ್ಯದಂಚಿನ ಗ್ರಾಮದ ಎರಡು ಕಡೆ ಬೋನುಗಳನ್ನು ಇಡಲಾಗಿತ್ತು. ಬೋನಿನಲ್ಲಿದ್ದ ಮಾಂಸವನ್ನು ಭಕ್ಷಿಸಲು ಬರುವ ಚಿರತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕಾದು ಕುಳಿತಿದ್ದರು. ಸೋಮವಾರ ಬೆಳಗಿನ ಜಾವ 5 ಗಂಟೆಯ ಹೊತ್ತಿಗೆ ಬೋನಿನಲ್ಲಿ ಚಿರತೆ ಸೆರೆಯಾಗಿದೆ. 3ವರ್ಷ ಪ್ರಾಯದ ಈ ಹೆಣ್ಣು ಚಿರತೆಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಆನೆಚೌಕೂರು ಪ್ರದೇಶದಲ್ಲಿ ಬಿಡಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಡಿ. ಗಾಂವ್ಕರ್ ಖಚಿತಪಡಿಸಿದ್ದಾರೆ.
‘ಡಿ. 6ರಂದು ಜಾನುವಾರುವನ್ನು ಕೊಂದಿದ್ದು ಹುಲಿ ಇರಬಹುದು ಎಂಬ ಗುಮಾನಿ ಹುಟ್ಟಿಕೊಂಡಿತ್ತು. ದಾಳಿಗೆ ಒಳಗಾದ ಜಾನುವಾರುವಿನ ಅವಶೇಷಗಳನ್ನು ಪರಿಶೀಲನೆ ಮಾಡಿದಾಗ ಅದು ಚಿರತೆ ಎಂಬುದು ಖಚಿತವಾಯಿತು. ಹೀಗಾಗಿ, ಶಿವಕುಮಾರ್ ಮತ್ತು ಸ್ವಾಮಿ ಎಂಬುವವರ ಜಮೀನಿನಲ್ಲಿ ಬೋನುಗಳನ್ನು ಇಡಲಾಗಿತ್ತು’ ಎಂದು ಅವರು ತಿಳಿಸಿದರು.
ಚಿರತೆ ಸೆರೆ ಹಿಡಿದ ವಿಷಯ ತಿಳಿಯುತ್ತಿದ್ದಂತೆ ಸುತ್ತಲಿನ ಗ್ರಾಮಸ್ಥರು ಜಕ್ಕಹಳ್ಳಿಯಲ್ಲಿ ನೆರೆದರು. ‘ತಾಲ್ಲೂಕಿನಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಕಾಡಂಚಿನ ಜಮೀನಿನಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹುಲಿ, ಆನೆ, ಚಿರತೆಗಳು ಒಂದಾದ ಮೇಲೊಂದರಂತೆ ದಾಳಿ ನಡೆಸುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.