ಬೆಳಗಾವಿ: ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಉಭಯ ಸದನಗಳಲ್ಲಿ ಹೋರಾಟ ನಡೆಸಲು ವಿರೋಧ ಪಕ್ಷ ಬಿಜೆಪಿ ಸಜ್ಜಾಗಿರುವ ಬೆನ್ನಲ್ಲೇ ಪ್ರತಿತಂತ್ರ ಹೆಣೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ.
ಹಿರಿಯ ಸಚಿವರ ಜೊತೆ ಸೋಮವಾರ ರಾತ್ರಿ ಸಮಾಲೋಚನೆ ನಡೆಸಿದ ಅವರು, ಉಭಯ ಸದನಗಳಲ್ಲಿ ಬಿಜೆಪಿಗೆ ತಿರುಗೇಟು ನೀಡಲು ಮುಂದಾಗುವಂತೆ ಸೂಚಿಸಿದರು.
‘ಸಚಿವರು ತಮಗೆ ನಿಗದಿಯಾದ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಬಿಜೆಪಿ ಸರ್ಕಾರದ ಅವಧಿಯ ಭ್ರಷ್ಟಾಚಾರ, ಯಡಿಯೂರಪ್ಪ ಸೇರಿದಂತೆ ಸಚಿವರಾಗಿದ್ದವರು ಜೈಲು ಸೇರಿದ ಪ್ರಕರಣಗಳನ್ನು ಪ್ರಸ್ತಾಪಿಸಿ ಅವರ ಬಣ್ಣವನ್ನು ಬಯಲು ಮಾಡಬೇಕು’ ಎಂದು ತಮ್ಮ ಸಹೋದ್ಯೋಗಿಗಳಿಗೆ ಕಿವಿಮಾತು ಹೇಳಿದರು ಎಂದು ಮೂಲಗಳು ತಿಳಿಸಿವೆ.
‘ಈ ಪ್ರಕರಣದಲ್ಲಿ ಜಾರ್ಜ್ ನಿರಪರಾಧಿ. ಅವರ ಪಕ್ಷದ ವರಿಷ್ಠರು ಸೂಚಿಸಿದ ಕಾರಣಕ್ಕೆ ವಿವಾದ ಸೃಷ್ಟಿಸಲು ಮುಂದಾಗಿದ್ದಾರೆ. ರಾಜಕೀಯವಾಗಿ ಇದನ್ನು ಎದುರಿಸಬೇಕಾಗಿದೆ. ಎರಡು ದಿನಕ್ಕಿಂತ ಹೆಚ್ಚು ದಿನ ಅವರು ಮುಂದುವರಿಸಲಾರರು. ಅದನ್ನು ಮೀರಿ ಮುಂದುವರಿಸಿದರೆ, ಬಿಜೆಪಿಯವರು ಉತ್ತರ ಕರ್ನಾಟಕದ ವಿರೋಧಿಗಳು ಎಂದೂ ಸದನದಲ್ಲಿ ಪ್ರಸ್ತಾಪಿಸಲು ಹಿಂಜರಿಯುವುದು ಬೇಡ’ ಎಂದು ಮುಖ್ಯಮಂತ್ರಿ ಹೇಳಿದ್ದಾಗಿ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.