ADVERTISEMENT

ಜೀವನದ ಗುರಿ ಸಾಧನೆಗೆ ಜೈನ ಧರ್ಮ ಪೂರಕ

​ಪ್ರಜಾವಾಣಿ ವಾರ್ತೆ
Published 3 ಜೂನ್ 2012, 19:30 IST
Last Updated 3 ಜೂನ್ 2012, 19:30 IST
ಜೀವನದ ಗುರಿ ಸಾಧನೆಗೆ ಜೈನ ಧರ್ಮ  ಪೂರಕ
ಜೀವನದ ಗುರಿ ಸಾಧನೆಗೆ ಜೈನ ಧರ್ಮ ಪೂರಕ   

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರು ನಗರಕ್ಕೆ ಭಾನುವಾರ ಪುರಪ್ರವೇಶ ಮಾಡಿದರು.

ಪುರಪ್ರವೇಶ ಆಯೋಜನಾ ಸಮಿತಿಯ ವತಿಯಿಂದ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಿ ಶಂಕರಪುರದ ಕರ್ನಾಟಕ ಜೈನ ಮಂದಿರಕ್ಕೆ ಮೆರವಣಿಗೆಯಲ್ಲಿ ಕರೆ ತರಲಾಯಿತು. ಸ್ವಾಮೀಜಿ ಅವರಿಗೆ ಪಾದಪೂಜೆ ನೆರವೇರಿಸಿದ ಬಳಿಕ ಜಿನ ಮಂದಿರದಲ್ಲಿ ನವಕಲಶಾಭಿಷೇಕ ಪೂಜೆ, ಆರಾಧನೆ ನಡೆಯಿತು. ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ದೇವರಿಗೆ ಕುಂಕುಮಾರ್ಚನೆ ಸಹಿತ ಷೋಡಶೋಷಚಾರ ಆರಾಧನೆ, ಪೂಜೆ ಜರುಗಿತು.
ಮಧ್ಯಾಹ್ನದ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಹೊಂಬುಜ ಸ್ವಾಮೀಜಿ ಮಾತನಾಡಿ, `ಜೀವನದಲ್ಲಿ ಗುರಿ ಸಾಧನೆಗೆ, ಸರ್ವಾಂಗೀಣ ಪ್ರಗತಿಗೆ ಜೈನ ಧರ್ಮ ಆಚರಣೆ ಪೂರಕ. ಜೈನ ಧರ್ಮವು ಸಮಾಜದಲ್ಲಿ ಹಿಂಸಾತ್ಮಕ ಮನೋಭಾವ ತಡೆಗಟ್ಟಿ ಸುಖ ಸಂತೋಷ ನೀಡುತ್ತದೆ~ ಎಂದರು.

ಗುರುವಂದನೆ ಸಲ್ಲಿಸಿದ ಹಿರಿಯ ಸಂಶೋಧಕ ಪ್ರೊ. ಹಂಪ ನಾಗರಾಜಯ್ಯ, `ಇಪ್ಪಂತ್ತೊಂದನೆಯ ಶತಮಾನದಲ್ಲಿ ಸ್ವಾಮೀಜಿ ಆಗುವುದು ಸುಲಭ ಅಲ್ಲ. ಅನೇಕ ಸವಾಲುಗಳನ್ನು ಎದುರಿಸಲು ಸ್ವಾಮೀಜಿ ಸಿದ್ಧರಾಗಿರಬೇಕು ಎಂದರು.
ಪದ್ಮಾವತಿ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ರಾಜ್ಯ ಆಡಳಿತ ನ್ಯಾಯಮಂಡಳಿ ಅಧ್ಯಕ್ಷ ಅಜಿತ್ ಸಿ. ಕಬ್ಬಿನ್ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಹೊಂಬುಜ ಸ್ವಾಮೀಜಿ ಅವರನ್ನು ಗೌರವಿಸಲಾಯಿತು.

ADVERTISEMENT

ಪುರಪ್ರವೇಶ ಆಯೋಜನಾ ಸಮಿತಿ ಗೌರವಾಧ್ಯಕ್ಷ ಸುರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಉದ್ಯಮಿ ಕೆ.ಜಯವರ್ಮರಾಜ ಬಲ್ಲಾಳ್, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ವಿ. ಧನಂಜಯ ಕುಮಾರ್, ಭಾರತೀಯ ಜೈನ್ ಮಿಲನ್ ಮುಖಂಡ ಎಂ.ಎಸ್.ಮೃತ್ಯುಂಜಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.