ಬೆಂಗಳೂರು: ಮೈಸೂರು–ಕೆಎಸ್ಆರ್ ಬೆಂಗಳೂರು ಸಿಟಿ ಪ್ಯಾಸೆಂಜರ್ ರೈಲನ್ನು ಜುಲೈ 28ರಿಂದ ಎಕ್ಸ್ಪ್ರೆಸ್ ಆಗಿ ಪರಿವರ್ತಿಸಲು ನೈಋತ್ಯ ರೈಲ್ವೆ ನಿರ್ಧರಿಸಿದ್ದು, ಮೈಸೂರು–ಬೆಂಗಳೂರು ನಡುವಣ ಪ್ರಯಾಣ ದರ ದುಪ್ಪಟ್ಟಾಗಲಿದೆ.
ಈ ನಿರ್ಧಾರಕ್ಕೆ ಪ್ರಯಾಣಿಕರಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ‘ನೈಋತ್ಯ ರೈಲ್ವೆಯು ಬೋಗಿಗಳನ್ನು ತೆರವುಗೊಳಿಸದೆ, ಕೆಲವು ನಿಲ್ದಾಣಗಳಲ್ಲಿ ನಿಲುಗಡೆ ಮಾಡದೆ ಈ ರೈಲನ್ನು ಓಡಿಸಲಿದೆ. ಇದರಿಂದಾಗಿ ಬೆಂಗಳೂರಿನಿಂದ ಮೈಸೂರಿಗೆ ₹ 30ರ ದರದಲ್ಲಿ ಪ್ರಯಾಣಿಸುತ್ತಿದ್ದವರು ದುಪ್ಪಟ್ಟು ದರ (₹ 60) ತೆರಬೇಕಾಗಲಿದೆ. ಬೆಂಗಳೂರಿನಿಂದ ಕೆಂಗೇರಿಗೆ ₹ 10 ನೀಡಿ ಪ್ರಯಾಣಿಸುತ್ತಿದ್ದವರು ಮುಂದೆ ₹ 30 ದರ ತೆರಬೇಕಾಗಲಿದೆ. ಸ್ಥಳೀಯ ಪ್ರಯಾಣಿಕರಿಗೆ ತೊಂದರೆಯಾಗಲಿದೆ’ ಎಂದು ಕರ್ನಾಟಕ ರೈಲ್ವೆ ವೇದಿಕೆಯ ಕೆ.ಎನ್. ಕೃಷ್ಣಪ್ರಸಾದ್ ಹೇಳಿದ್ದಾರೆ.
ರೈಲನ್ನು ಎಕ್ಸ್ಪ್ರೆಸ್ ಆಗಿ ಪರಿವರ್ತನೆ ಮಾಡಿರುವುದರಿಂದ ಪ್ರಯಾಣದ ಅವಧಿಯಲ್ಲಿ ಬಹಳ ವ್ಯತ್ಯಾಸವಾಗುವುದಿಲ್ಲ. ಪ್ರಯಾಣ ದರ ದುಬಾರಿಯಾಗಲಿದ್ದು, ಬಡವರಿಗೆ ಹೊರೆಯಾಗಲಿದೆ ಎಂದು ಕೃಷ್ಣಪ್ರಸಾದ್ ಹೇಳಿದ್ದಾರೆ.
ಉಳಿದಂತೆ, ತಿರುಪತಿ ಪ್ಯಾಸೆಂಜರ್(ರೈಲು ಸಂಖ್ಯೆ 56213) ಮತ್ತು ಬೆಂಗಳೂರು ಪ್ಯಾಸೆಂಜರ್(56263) ರೈಲುಗಳು ಈಗಿರುವ ₹ 30ರ ಪ್ರಯಾಣ ದರದಲ್ಲೇ ಮೈಸೂರು–ಬೆಂಗಳೂರು ನಡುವೆ ಪ್ರಯಾಣಿಕರನ್ನು ಕರೆದೊಯ್ಯಲಿವೆ. ತಾಳಗುಪ್ಪ ಎಕ್ಸ್ಪ್ರೆಸ್ನಿಂದ ಕೆಲ ಸ್ಲೀಪರ್ ಮತ್ತು ಎಸಿ ಬೋಗಿಗಳನ್ನು ತೆರವುಗೊಳಿಸಲಾಗಿದ್ದು, ಪ್ಯಾಸೆಂಜರ್ ರೈಲು ಆಗಿ ಪರಿವರ್ತಿಸಲಾಗಿದೆ.
[Related]
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.