ಹುಬ್ಬಳ್ಳಿ: ಮಗುವಿಗೆ ಪ್ರವೇಶ ನೀಡಲು ₹ 50 ಸಾವಿರ ಲಂಚ ಕೇಳಿದ ಆರೋಪದ ಮೇರೆಗೆ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳ ಇಲ್ಲಿನ ರಾಜನಗರ ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಸಿದ್ಧಾರೂಢ ಮೇತ್ರೆ ಅವರನ್ನು ಬಂಧಿಸಿದೆ.
ಬಸವರಾಜ ಸಣ್ಣಪೂಜಾರ ಎಂಬುವವರು ಬೇರೆ ಊರಿನಿಂದ ನಗರಕ್ಕೆ ವರ್ಗವಾಗಿ ಬಂದಿದ್ದು, ತಮ್ಮ ಮಗ ಚೇತನ್ಗೆ 4ನೇ ತರಗತಿ ಪ್ರವೇಶ ಬಯಸಿ ಪ್ರಾಚಾರ್ಯರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಬೇರೆ ಊರಿನ ಕೇಂದ್ರೀಯ ವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಯನ್ನು ತಮ್ಮ ಶಾಲೆಯಲ್ಲಿ ಸೇರಿಸಿಕೊಳ್ಳಬೇಕು ಎಂದರೆ ಲಂಚ ನೀಡಬೇಕು ಎಂದು ಬಸವರಾಜ ಅವರಲ್ಲಿ ಬೇಡಿಕೆ ಇಟ್ಟಿದ್ದರು.
ಬಸವರಾಜ ಅವರು ಸಿಬಿಐಗೆ ದೂರು ನೀಡಿದ್ದರು. ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಬೆಂಗಳೂರಿನ ಸಿಬಿಐ ಅಧಿಕಾರಿಗಳು ಭಾನುವಾರವೇ ಸಿದ್ಧಾರೂಢ ಅವರನ್ನು ಬಂಧಿಸಿ ತನಿಖೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಈ ಹಿಂದೆಯೂ ಹಲವು ಪೋಷಕರಿಂದ ಮಕ್ಕಳಿಗೆ ಸೀಟು ಕೊಡುವುದಾಗಿ ಭರವಸೆ ನೀಡಿ ಹಣದ ಬೇಡಿಕೆ ಇಟ್ಟಿದ್ದರು ಎಂದು ಗೊತ್ತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.