ADVERTISEMENT

ತೀವ್ರಗೊಂಡ ಬಂಡಾಯ

ಬಿಜೆಪಿ, ಕಾಂಗ್ರೆಸ್‌, ಎಎಪಿಯಲ್ಲಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 20:05 IST
Last Updated 22 ಮಾರ್ಚ್ 2014, 20:05 IST

ಬೆಂಗಳೂರು/ಶಿವಮೊಗ್ಗ/ಬೀದರ್/ಮಂಗಳೂರು: ಲೋಕಸಭಾ ಚುನಾ­ವಣೆ ಟಿಕೆಟ್‌ ಹಂಚಿಕೆ ನಂತರ ಕಾಂಗ್ರೆಸ್‌, ಬಿಜೆಪಿಯಲ್ಲಿ ಎದ್ದ ಬಂಡಾ­ಯದ ಬಿಸಿ ಜೋರಾಗುತ್ತಲೇ ಇದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿ­ಯು­ವುದಾಗಿ ಕಾಂಗ್ರೆಸ್‌ ಮುಖಂಡ ಕುಮಾರ್‌ ಬಂಗಾರಪ್ಪ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಅತ್ತ ಬೀದರ್‌ನಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಸೂರ್ಯ­ಕಾಂತ ನಾಗಮಾರಪಲ್ಲಿ ಪರ ಶನಿ­ವಾರವೂ ಪ್ರತಿಭಟನೆಗಳು ನಡೆದಿದ್ದು, ಅವರೂ ಬಂಡಾಯ ಅಭ್ಯರ್ಥಿ­ಯಾಗುವ ಸಾಧ್ಯತೆ ಇದೆ.

ಆಮ್‌ ಆದ್ಮಿ ಪಕ್ಷದಲ್ಲೂ ಬಂಡಾಯದ ಕಿಡಿ ಏಳುವ ಲಕ್ಷಣ ಕಂಡು ಬರುತ್ತಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಮುಖಂಡರ ನಡುವೆಯೇ ಕಿತ್ತಾಟ, ಮಾತಿನ ಚಕಮಕಿ ನಡೆದಿದೆ.

ಸ್ಪರ್ಧೆ ನಿಶ್ಚಿತ: ಶಿವಮೊಗ್ಗ ಕ್ಷೇತ್ರದಲ್ಲಿ ಮಂಜುನಾಥ ಭಂಡಾರಿ ಅವರನ್ನು ಬದಲಿಸಿ ತಮಗೆ ಟಿಕೆಟ್‌ ನೀಡುವಂತೆ ಒತ್ತಾಯಿಸುತ್ತಿರುವ ಕುಮಾರ್‌ ಬಂಗಾರಪ್ಪ, ಪಟ್ಟು ಬಿಗಿಗೊಳಿಸುವ ಸೂಚನೆ ನೀಡಿದ್ದಾರೆ. ಶಿವಮೊಗ್ಗದ ತಮ್ಮ ನಿವಾಸದಲ್ಲಿ ಶನಿವಾರ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಬೆಂಬಲಿಗರ ಜೊತೆ ಸಭೆ  ಬಳಿಕ ಪತ್ರಿ­ಕಾ­ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಟಿಕೆಟ್‌ ದೊರೆ­ಯದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾ­ವ­ಣೆಗೆ ಸ್ಪರ್ಧಿಸುವುದಾಗಿ ಪ್ರಕಟಿಸಿದರು.

‘ಟಿಕೆಟ್‌ ವಿಚಾರದಲ್ಲಿ ಎಐಸಿಸಿ ಮುಖಂಡರೊಬ್ಬರು ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ನಾನು ಭಾನುವಾರ ಸಂಜೆ ದೆಹಲಿಗೆ ಹೋಗು­ತ್ತಿದ್ದೇನೆ. ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ನನಗೆ ಟಿಕೆಟ್‌ ನೀಡುವಂತೆ ಮನವಿ ಮಾಡುತ್ತೇನೆ. ಟಿಕೆಟ್ ದೊರೆ­ಯದಿದ್ದರೆ ಬೇರೆ ಯಾವುದೇ ಪಕ್ಷಕ್ಕೂ ಹೋಗುವುದಿಲ್ಲ’ ಎಂದು ಅವರು ತಿಳಿಸಿದರು.

‘ಗೀತಾ ಹಿಂದಕ್ಕೆ ಸರಿಯಲಿ’
ವರನಟ ಡಾ.ರಾಜ್‌ಕುಮಾರ್‌ ಅವರ ಹೆಸರಿಗೆ ಕಳಂಕ ಬರುವುದರಿಂದ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್‌­ಕುಮಾರ್‌ ಕಣ­ದಿಂದ ಹಿಂದಕ್ಕೆ ಸರಿಯ­ಬೇಕು ಎಂದು ಡಾ.ರಾಜ್‌ ಅಭಿಮಾನಿ­ಗಳು ಈಗಾಗಲೇ ಮನವಿ ಮಾಡಿ­ದ್ದಾರೆ. ಅವರ ಸಂಸಾರ ಸರಿಯಾಗಿರ­ಬೇಕು ಎಂಬ ಉದ್ದೇಶದಿಂದ ತಾವು ಕೂಡ ಇದೇ ಮನವಿ ಮಾಡುವುದಾಗಿ ಕುಮಾರ್ ಬಂಗಾರಪ್ಪ ಹೇಳಿದರು.

ಶಿವರಾಜ್‌ ಕುಮಾರ್ , ಸೋದರ ಮಧು ಬಂಗಾರಪ್ಪ ವಿರುದ್ಧ­ವೂ ಅವರು ವಾಗ್ದಾಳಿ ನಡೆಸಿದರು.

ಬೀದರ್‌ನಲ್ಲಿ ಪ್ರತಿ­ಭಟನೆ: ಸೂರ್ಯ­ಕಾಂತ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಶನಿ­ವಾರವೂ ಬೀದರ್‌ನಲ್ಲಿ ಪ್ರತಿಭಟನೆ ನಡೆ­ದಿದ್ದು, ಒತ್ತಡ ತಂತ್ರ­ವಾಗಿ ಇಬ್ಬರು ಬೆಂಬಲಿಗರು ಆತ್ಮಹತ್ಯೆಗೂ ಯತ್ನಿಸಿದರು.

ಪ್ರತಿಭಟನೆಯಲ್ಲಿದ್ದ ಸೋಮನಾಥ ಮುಧೋಳಕರ್‌ ಮಡಿವಾಳ ವೃತ್ತದಲ್ಲಿ ಪೆಟ್ರೋಲ್‌ ಸುರಿದುಕೊಂಡು ಆತ್ಮ­ಹತ್ಯೆಗೆ ಯತ್ನಿಸಿದರೆ, ಮತ್ತೊಬ್ಬ ಬೆಂಬ­ಲಿಗ ಅಲಿಯಂಬರ್‌ ಗ್ರಾಮದ ಮಹ­ದೇವ ಬಸವರಾಜ್‌ ಬಿಜೆಪಿ ಕಚೇರಿ ಎದುರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.

ಆಪ್‌ ಮುಖಂಡರ ಕಿತ್ತಾಟ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ (ಆಪ್‌) ಅಭ್ಯರ್ಥಿ, ಮಂಗಳೂರು ವಿಮಾನ ನಿಲ್ದಾಣದ ನಿವೃತ್ತ ನಿರ್ದೇಶಕ ಎಂ.ಆರ್‌. ವಾಸು­ದೇವ್‌  ಶನಿವಾರ ನಾಮಪತ್ರ ಸಲ್ಲಿಸು­ವಾಗ ಆಪ್‌ನ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ರಾಬರ್ಟ್‌ ರೊಸಾರಿಯೊ  ಅಪಸ್ವರ ಎತ್ತಿದ್ದರಿಂದ ಗೊಂದ­­ಲವಾ­ಯಿತು.

ವಾಸುದೇವ್‌ ನಾಮಪತ್ರ ಸಲ್ಲಿಸಲು ಬಂದಾಗ ಅವರ ಜತೆ­ಯಲ್ಲಿಯೇ ಇದ್ದ ರೊಸಾರಿಯೊ, ‘ವಾಸುದೇವ್‌ ಅಧಿಕೃತ ಅಭ್ಯರ್ಥಿಯೇ ಅಲ್ಲ. ನಮೋ ಬ್ರಿಗೇಡ್‌ ಸದಸ್ಯ­ರಾದ ಅವರು ಸಂಘ ಪರಿ­ವಾ­ರದ ಅಭ್ಯರ್ಥಿ’ ಎಂದು ದೂರಿದರು.

ಆಗ ಪಕ್ಷದ  ಕಾರ್ಯಕರ್ತರು ರೊಸಾರಿಯೊ ಅವರನ್ನು ಸುತ್ತುವರಿ­ದು, ಅವರು ಧರಿಸಿದ್ದ ಪಕ್ಷದ ಟೋಪಿ ಹಾಗೂ ಕನ್ನಡಕವನ್ನು ಕಿತ್ತುಕೊಂಡು ಹಲ್ಲೆಗೆ ಮುಂದಾದರು. 
‘ರೊಸಾರಿಯೊ ಅವರನ್ನು ಪಕ್ಷ­ದಿಂದ ಉಚ್ಚಾಟಿಸಲಾಗಿದೆ. ಅವರ ಮಾತಿಗೆ ಬೆಲೆ ಕೊಡಬೇಕಿಲ್ಲ ಎಂದು ಪಕ್ಷದ ಪ್ರಚಾರ ಅಭಿಯಾನದ ವ್ಯವಸ್ಥಾಪಕ ಜಯಪ್ರಕಾಶ್‌ ರಾವ್‌ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.