ಬೆಂಗಳೂರು/ಶಿವಮೊಗ್ಗ/ಬೀದರ್/ಮಂಗಳೂರು: ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆ ನಂತರ ಕಾಂಗ್ರೆಸ್, ಬಿಜೆಪಿಯಲ್ಲಿ ಎದ್ದ ಬಂಡಾಯದ ಬಿಸಿ ಜೋರಾಗುತ್ತಲೇ ಇದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಕಾಂಗ್ರೆಸ್ ಮುಖಂಡ ಕುಮಾರ್ ಬಂಗಾರಪ್ಪ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಅತ್ತ ಬೀದರ್ನಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಸೂರ್ಯಕಾಂತ ನಾಗಮಾರಪಲ್ಲಿ ಪರ ಶನಿವಾರವೂ ಪ್ರತಿಭಟನೆಗಳು ನಡೆದಿದ್ದು, ಅವರೂ ಬಂಡಾಯ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
ಆಮ್ ಆದ್ಮಿ ಪಕ್ಷದಲ್ಲೂ ಬಂಡಾಯದ ಕಿಡಿ ಏಳುವ ಲಕ್ಷಣ ಕಂಡು ಬರುತ್ತಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಮುಖಂಡರ ನಡುವೆಯೇ ಕಿತ್ತಾಟ, ಮಾತಿನ ಚಕಮಕಿ ನಡೆದಿದೆ.
ಸ್ಪರ್ಧೆ ನಿಶ್ಚಿತ: ಶಿವಮೊಗ್ಗ ಕ್ಷೇತ್ರದಲ್ಲಿ ಮಂಜುನಾಥ ಭಂಡಾರಿ ಅವರನ್ನು ಬದಲಿಸಿ ತಮಗೆ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿರುವ ಕುಮಾರ್ ಬಂಗಾರಪ್ಪ, ಪಟ್ಟು ಬಿಗಿಗೊಳಿಸುವ ಸೂಚನೆ ನೀಡಿದ್ದಾರೆ. ಶಿವಮೊಗ್ಗದ ತಮ್ಮ ನಿವಾಸದಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರ ಜೊತೆ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಟಿಕೆಟ್ ದೊರೆಯದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಪ್ರಕಟಿಸಿದರು.
‘ಟಿಕೆಟ್ ವಿಚಾರದಲ್ಲಿ ಎಐಸಿಸಿ ಮುಖಂಡರೊಬ್ಬರು ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ನಾನು ಭಾನುವಾರ ಸಂಜೆ ದೆಹಲಿಗೆ ಹೋಗುತ್ತಿದ್ದೇನೆ. ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ನನಗೆ ಟಿಕೆಟ್ ನೀಡುವಂತೆ ಮನವಿ ಮಾಡುತ್ತೇನೆ. ಟಿಕೆಟ್ ದೊರೆಯದಿದ್ದರೆ ಬೇರೆ ಯಾವುದೇ ಪಕ್ಷಕ್ಕೂ ಹೋಗುವುದಿಲ್ಲ’ ಎಂದು ಅವರು ತಿಳಿಸಿದರು.
‘ಗೀತಾ ಹಿಂದಕ್ಕೆ ಸರಿಯಲಿ’
ವರನಟ ಡಾ.ರಾಜ್ಕುಮಾರ್ ಅವರ ಹೆಸರಿಗೆ ಕಳಂಕ ಬರುವುದರಿಂದ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಕಣದಿಂದ ಹಿಂದಕ್ಕೆ ಸರಿಯಬೇಕು ಎಂದು ಡಾ.ರಾಜ್ ಅಭಿಮಾನಿಗಳು ಈಗಾಗಲೇ ಮನವಿ ಮಾಡಿದ್ದಾರೆ. ಅವರ ಸಂಸಾರ ಸರಿಯಾಗಿರಬೇಕು ಎಂಬ ಉದ್ದೇಶದಿಂದ ತಾವು ಕೂಡ ಇದೇ ಮನವಿ ಮಾಡುವುದಾಗಿ ಕುಮಾರ್ ಬಂಗಾರಪ್ಪ ಹೇಳಿದರು.
ಶಿವರಾಜ್ ಕುಮಾರ್ , ಸೋದರ ಮಧು ಬಂಗಾರಪ್ಪ ವಿರುದ್ಧವೂ ಅವರು ವಾಗ್ದಾಳಿ ನಡೆಸಿದರು.
ಬೀದರ್ನಲ್ಲಿ ಪ್ರತಿಭಟನೆ: ಸೂರ್ಯಕಾಂತ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಶನಿವಾರವೂ ಬೀದರ್ನಲ್ಲಿ ಪ್ರತಿಭಟನೆ ನಡೆದಿದ್ದು, ಒತ್ತಡ ತಂತ್ರವಾಗಿ ಇಬ್ಬರು ಬೆಂಬಲಿಗರು ಆತ್ಮಹತ್ಯೆಗೂ ಯತ್ನಿಸಿದರು.
ಪ್ರತಿಭಟನೆಯಲ್ಲಿದ್ದ ಸೋಮನಾಥ ಮುಧೋಳಕರ್ ಮಡಿವಾಳ ವೃತ್ತದಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರೆ, ಮತ್ತೊಬ್ಬ ಬೆಂಬಲಿಗ ಅಲಿಯಂಬರ್ ಗ್ರಾಮದ ಮಹದೇವ ಬಸವರಾಜ್ ಬಿಜೆಪಿ ಕಚೇರಿ ಎದುರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.
ಆಪ್ ಮುಖಂಡರ ಕಿತ್ತಾಟ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ (ಆಪ್) ಅಭ್ಯರ್ಥಿ, ಮಂಗಳೂರು ವಿಮಾನ ನಿಲ್ದಾಣದ ನಿವೃತ್ತ ನಿರ್ದೇಶಕ ಎಂ.ಆರ್. ವಾಸುದೇವ್ ಶನಿವಾರ ನಾಮಪತ್ರ ಸಲ್ಲಿಸುವಾಗ ಆಪ್ನ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ರಾಬರ್ಟ್ ರೊಸಾರಿಯೊ ಅಪಸ್ವರ ಎತ್ತಿದ್ದರಿಂದ ಗೊಂದಲವಾಯಿತು.
ವಾಸುದೇವ್ ನಾಮಪತ್ರ ಸಲ್ಲಿಸಲು ಬಂದಾಗ ಅವರ ಜತೆಯಲ್ಲಿಯೇ ಇದ್ದ ರೊಸಾರಿಯೊ, ‘ವಾಸುದೇವ್ ಅಧಿಕೃತ ಅಭ್ಯರ್ಥಿಯೇ ಅಲ್ಲ. ನಮೋ ಬ್ರಿಗೇಡ್ ಸದಸ್ಯರಾದ ಅವರು ಸಂಘ ಪರಿವಾರದ ಅಭ್ಯರ್ಥಿ’ ಎಂದು ದೂರಿದರು.
ಆಗ ಪಕ್ಷದ ಕಾರ್ಯಕರ್ತರು ರೊಸಾರಿಯೊ ಅವರನ್ನು ಸುತ್ತುವರಿದು, ಅವರು ಧರಿಸಿದ್ದ ಪಕ್ಷದ ಟೋಪಿ ಹಾಗೂ ಕನ್ನಡಕವನ್ನು ಕಿತ್ತುಕೊಂಡು ಹಲ್ಲೆಗೆ ಮುಂದಾದರು.
‘ರೊಸಾರಿಯೊ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಅವರ ಮಾತಿಗೆ ಬೆಲೆ ಕೊಡಬೇಕಿಲ್ಲ ಎಂದು ಪಕ್ಷದ ಪ್ರಚಾರ ಅಭಿಯಾನದ ವ್ಯವಸ್ಥಾಪಕ ಜಯಪ್ರಕಾಶ್ ರಾವ್ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.