ADVERTISEMENT

ತುರ್ಚೆಗುಡ್ಡೆ ಮೀಸಲು ಅರಣ್ಯದಲ್ಲಿ ಬೆಂಕಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 19:30 IST
Last Updated 4 ಮಾರ್ಚ್ 2012, 19:30 IST

ಚಿಕ್ಕಮಗಳೂರು: ನಗರಕ್ಕೆ ಹೊಂದಿಕೊಂಡಂತಿರುವ ಜಿಲ್ಲಾ ಪಂಚಾಯಿತಿ ಹಿಂಭಾಗದ ತುರ್ಚೆಗುಡ್ಡ ಮೀಸಲು ಅರಣ್ಯಕ್ಕೆ ಬೆಂಕಿ ಬಿದ್ದಿದ್ದು, ಭಾನುವಾರ ಸಂಜೆಯಾದರೂ ಬೆಂಕಿ ನಿಯಂತ್ರಣಕ್ಕೆ ಬಂದಿರಲಿಲ್ಲ.

ಶನಿವಾರ ಮಧ್ಯಾಹ್ನವೇ ಬೆಂಕಿ ಕಾಣಿಸಿಕೊಂಡಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಸಕಾಲಕ್ಕೆ ಆಗಮಿಸಿ ಬೆಂಕಿ ನಂದಿಸದ ಪರಿಣಾಮ ಬೆಂಕಿಯ ಕೆನ್ನಾಲಿಗೆ ಇಡೀ ಅರಣ್ಯಕ್ಕೆ ಹರಡಿದೆ ಎಂದು ಸ್ಥಳೀಯರು `ಪ್ರಜಾವಾಣಿ~ ಬಳಿ ದೂರಿದರು.

`ಇಲಾಖೆ ಸಿಬ್ಬಂದಿಯನ್ನು ಸ್ಥಳಕ್ಕೆ ರವಾನಿಸಿದ್ದೇವೆ. ಬೆಂಕಿ ನಿಯಂತ್ರಣಕ್ಕೆ ಬಂದಿದೆ. 5ರಿಂದ 6 ಎಕರೆ ಅರಣ್ಯ ಪ್ರದೇಶ ಬೆಂಕಿಯಲ್ಲಿ ಬೆಂದುಹೋಗಿದೆ. ಬೆಂಕಿ ನೆಲಮಟ್ಟದಲ್ಲಿರುವುದರಿಂದ ಮರಗಳಿಗೆ ಹಾನಿಯಾಗಿಲ್ಲ.
ನೆಲದಲ್ಲಿ ಹರಡಿರುವ ದರಗು, ಗಿಡಗಂಟಿ ಸುಟ್ಟು ಹೋಗಿವೆ~ ಎಂದು ಪ್ರಭಾರ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವಾಣ್ ಹೇಳಿದರು.

ಆದರೆ `ಪ್ರಜಾವಾಣಿ~ ಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿದಾಗ ಬೆಂಕಿ ಧಗಧಗನೇ ಉರಿಯುತ್ತಿತ್ತು. ಅರಣ್ಯ ಇಲಾಖೆಯ ಒಬ್ಬ ಸಿಬ್ಬಂದಿಯೂ ಸ್ಥಳದಲ್ಲಿ ಕಾಣಿಸಲಿಲ್ಲ. ಅರಣ್ಯದ ಅಕೇಶಿಯಾ ನೆಡುತೋಪು, ಗಿಡಗಂಟಿಗಳು ಬೆಂಕಿ ಜ್ವಾಲೆಯಲ್ಲಿ ಪೂರ್ಣ ಭಸ್ಮವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.