ADVERTISEMENT

ತೋಟದ ಮಾಲೀಕನ ಕೊಲೆ ಪ್ರಕರಣ; ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಮೇ 2018, 19:57 IST
Last Updated 7 ಮೇ 2018, 19:57 IST
ಆರೋಪಿಗಳನ್ನು ಕರೆತಂದ ಪೊಲೀಸರು ತೋಟದಲ್ಲಿ ಪರಿಶೀಲನೆ ನಡೆಸಿದರು
ಆರೋಪಿಗಳನ್ನು ಕರೆತಂದ ಪೊಲೀಸರು ತೋಟದಲ್ಲಿ ಪರಿಶೀಲನೆ ನಡೆಸಿದರು   

ಗೌರಿಬಿದನೂರು: ಹಣಕ್ಕಾಗಿ ತೋಟದ ಮಾಲೀಕನನ್ನು ಕೊಲೆ ಮಾಡಿ ಪರಾರಿಯಾಗುತ್ತಿದ್ದ ಮೂವರನ್ನು ಗೌರಿಬಿದನೂರು ಠಾಣೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.

ಬೆಂಗಳೂರು ಮೂಲದ ಕರೀಂಖಾನ್ (73) ಕೊಲೆಯಾದ ವ್ಯಕ್ತಿ. ಈತನನ್ನು ಆಸ್ಸಾಂ ಮೂಲದವರಾದ ಹುಸೇನ್, ಜಾಕೀರ್ ಮತ್ತು ಮುತಾಬುದ್ದೀನ್ ಎಂಬ ಆರೋಪಿಗಳು ಕೊಲೆ ಮಾಡಿ ರೈಲಿನಲ್ಲಿ ಆಸ್ಸಾಂಗೆ ತೆರಳುತ್ತಿದ್ದರು. ಆರೋಪಿಗಳ ಪತ್ತೆಗೆ ಬೆಂಗಳೂರಿನಿಂದ ವಿಮಾನದಲ್ಲಿ ಕೋಲ್ಕತ್ತದ ಹೌರಾ ಜಂಕ್ಷನ್‌ಗೆ ತೆರಳಿ ಅಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ವಿವರ: ಬೆಂಗಳೂರು ಮೂಲಕ ಕರೀಂಖಾನ್ ಅವರು ಹೊಸೂರು ಹೋಬಳಿ ಗೊಡ್ಡಾವಲಹಳ್ಳಿ ಹೊರವಲಯದಲ್ಲಿ 7 ಎಕರೆ 12 ಗುಂಟೆ ಜಮೀನಿದೆ. ಅಲ್ಲಿ ಕೆಲಸಕ್ಕೆ ಆಸ್ಸಾಂನಿಂದ ಹುಸೇನ್‌, ಜಾಕೀರ್ ಮತ್ತು ಮುತಾಬುದ್ದೀನ್‌ ಅವರನ್ನು ಕರೆದುಕೊಂಡು ಬಂದಿದ್ದರು. ತೋಟದ ಮನೆ ಮತ್ತು ಜಮೀನು ಕಾವಲು ಮಾಡಿಕೊಂಡಿದ್ದರು.

ADVERTISEMENT

ತೋಟದ ಮಾಲೀಕ ಕರೀಂಖಾನ್ ಅವರು ಮೇ 3ರಂದು ತೋಟಕ್ಕೆ ಭೇಟಿ ನೀಡಿದ್ದಾಗ ಅವರನ್ನು ತೋಟದ ಶೆಡ್‌ನಲ್ಲಿ ಕೂಡಿ ಹಾಕಿ ₹ 70 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಕರೀಂ ಖಾನ್ ಅವರ ಮಗ ಅಯೂಬ್ ಖಾನ್ ಅವರಿಗೆ ಕರೆ ಮಾಡಿದ್ದರು. ಹಣ ಕೊಡದೇ ಇದ್ದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದರು.ಅಯೂಬ್ ಖಾನ್ ನೀಡಿದ ದೂರಿನ ಮೇರೆಗೆ ತೋಟಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಕರೀಂ ಅವರನ್ನು ಆರೋಪಿಗಳು ಕೊಲೆ ಮಾಡಿ ಗುಂಡಿಯಲ್ಲಿ ಹಾಕಿ ಪರಾರಿಯಾಗಿದ್ದು ಗೊತ್ತಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.