ADVERTISEMENT

ದ.ಕ, ಕೊಡಗಿನಲ್ಲಿ ಮುಂಗಾರು ಬಿರುಸು

​ಪ್ರಜಾವಾಣಿ ವಾರ್ತೆ
Published 16 ಜೂನ್ 2012, 19:30 IST
Last Updated 16 ಜೂನ್ 2012, 19:30 IST

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಶನಿವಾರ ಮುಂಗಾರು ಚುರುಕುಗೊಂಡಿದ್ದು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಹಲವಡೆ ಉತ್ತಮ ಮಳೆ ಸುರಿದಿದೆ.

ಮಂಗಳೂರು ವರದಿ: ಮೂರು ದಿನಗಳಿಂದ ಕೈಕೊಟ್ಟಿದ್ದ ಮುಂಗಾರು ಮಳೆ ಶನಿವಾರ ಕರಾವಳಿ ಭಾಗದಲ್ಲಿ ಮತ್ತೆ ಸುರಿಯಲಾರಂಭಿಸಿದ್ದು, ಮಧ್ಯಾಹ್ನದಿಂದ ಆರಂಭವಾದ ಜಿಟಿ ಜಿಟಿ ಮಳೆ ರಾತ್ರಿಯ ವರೆಗೂ ಮುಂದುವರಿದಿತ್ತು.
ಕರಾವಳಿ ಭಾಗದಲ್ಲಿ ಪ್ರತಿ ವರ್ಷ ಜೂನ್ ಮಧ್ಯಭಾಗದ ವೇಳೆಗಾಗಲೇ ಭೂಮಿಯಲ್ಲಿ ನೀರಿನ ಒರತೆ ಆರಂಭವಾಗುತ್ತಿತ್ತು. ಆದರೆ ಮಳೆ ಕೊರತೆಯಿಂದ ಈ ಬಾರಿ ಒರತೆ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಬತ್ತದ ಬೀಜ ಬಿತ್ತನೆಯಂತಹ ಕಾರ್ಯಗಳಿಗೆ ಹಿನ್ನಡೆ ಉಂಟಾಗಿದೆ.

ದಟ್ಟ ಮೋಡಗಳೊಂದಿಗೆ ಶನಿವಾರ ಆರಂಭವಾಗಿರುವ ಮಳೆ ಇನ್ನು ಕೆಲವು ದಿನ ಹೀಗೆಯೇ ಮುಂದುವರಿಯುವ ಸಾಧ್ಯತೆ ಕಂಡುಬಂದಿದೆ. ಇದರಿಂದ ಕೃಷಿ ಕಾರ್ಯ ಚುರುಕಾಗಿದ್ದು, ಎಲ್ಲೆಡೆ ಹೊಲಗಳನ್ನು ಟಿಲ್ಲರ್, ಎತ್ತು, ಕೋಣಗಳ ಸಹಾಯದಿಂದ ಹದಗೊಳಿಸುವ ದೃಶ್ಯಗಳು ಕಂಡುಬಂದವು. ಮಧ್ಯಾಹ್ನ ಜೋರಾಗಿ ಮಳೆ ಸುರಿದುದು ಬಿಟ್ಟರೆ ಜಿಟಿ ಜಿಟಿ ಮಳೆಯೇ ಕರಾವಳಿ ಭಾಗದುದ್ದಕ್ಕೂ ಸುರಿದುದರಿಂದ ಯಾವುದೇ ಹಾನಿ ಆಗಿರುವ ವರದಿಯಾಗಿಲ್ಲ.

ಕಳೆದ ವರ್ಷ ಜೂನ್ ತಿಂಗಳ ಮೊದಲ 15 ದಿನಗಳಲ್ಲಿ 569 ಮಿ.ಮೀ. ಮಳೆ ಸುರಿದಿದ್ದರೆ, ಈ ವರ್ಷ ಕೇವಲ 209 ಮಿ.ಮೀ. ಮಳೆ ಮಾತ್ರ ಸುರಿದಿದೆ.

ಮಡಿಕೇರಿ ವರದಿ:  ಕೊಡಗು ಜಿಲ್ಲೆಯಾದ್ಯಂತ ಶನಿವಾರ ಉತ್ತಮ ಮಳೆ ಸುರಿದಿದ್ದು, ಮುಂಗಾರಿನ ನಿಜವಾದ ಅನುಭವ ತಂದುಕೊಟ್ಟಿತು.

ಬತ್ತ ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ನೀರಿನ ಸೆಲೆಗಳಾದ ಹಳ್ಳ, ಹೊಂಡ, ಕೆರೆಗೆ ನೀರು ಹರಿದು ಬರುತ್ತಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಸೋಮವಾರ ಪೇಟೆ, ನಾಪೋಕ್ಲು, ಸಂಪಾಜೆ, ಭಾಗಮಂಡಲ, ಶ್ರಿಮಂಗಲ, ಪೊನ್ನಂಪೇಟೆ, ಅಮ್ಮತ್ತಿ, ಬಾಳಲೆ, ಸೋಮವಾರಪೇಟೆ ಕಸಬಾ, ಶನಿವಾರಸಂತೆ, ಶಾಂತಳ್ಳಿಯಲ್ಲಿ ಉತ್ತಮ ಮಳೆಯಾಗಿದೆ. ಹಾರಂಗಿ ಜಲಾಶಯಕ್ಕೆ 105 ಕ್ಯೂಸೆಕ್ ನೀರು ಹರಿದು ಬಂದಿದ್ದು, ನೀರಿನ ಮಟ್ಟ 2,802.30 ಅಡಿಗೆ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.