ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿಗೆ ಆಗಮಿಸುವ ಪ್ರವಾಸಿಗರಿಗೆ ಸಿಹಿ ಸುದ್ದಿ. ದಸರಾ ಕಾರ್ಯಕ್ರಮಗಳನ್ನು ವೀಕ್ಷಿಸುವ ಜತೆಗೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಪುಟ್ಟ ವಿಮಾನದಿಂದ ನಗರ ಪ್ರದಕ್ಷಿಣೆ ಹಾಕಿ ‘ಜಾಲಿ ರೈಡ್’ ಸಹ ಮಾಡಬಹುದು.
ಜಿಲ್ಲಾಡಳಿತ ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಸಹಯೋಗದೊಂದಿಗೆ ಪ್ರವಾಸಿಗರಿಗಾಗಿ ‘ಮಹಾರಾಜ’ ಮತ್ತು ‘ಯುವರಾಜ’ ಎಂಬ ಪುಟ್ಟ ವಿಮಾನಗಳ ಹಾರಾಟವನ್ನು ಅ. 5ರಿಂದ 14ರವರಗೆ ಏರ್ಪಡಿಸಿದೆ.
‘ಮಹಾರಾಜ’ ವಿಮಾನದಲ್ಲಿ ಪೈಲೆಟ್ ಜೊತೆಗೆ ಒಬ್ಬರು, ‘ಯುವರಾಜ’ ವಿಮಾನದಲ್ಲಿ ಪೈಲೆಟ್ ಜೊತೆಗೆ ಮೂವರು ಪ್ರಯಾಣಿಕರು ಕುಟುಂಬ ಸಮೇತರಾಗಿ ಪ್ರಯಾಣಿಸಬಹುದು. ಚಾಮುಂಡಿ ಬೆಟ್ಟ, ಅರಮನೆ, ಸೇಂಟ್ ಫಿಲೊಮಿನಾ ಚರ್ಚ್ನ್ನು ಒಂದು ಸುತ್ತು ಹಾಕಿ 15 ನಿಮಿಷಗಳಲ್ಲಿ ವಿಮಾನ ವಾಪಸಾಗಲಿದೆ.
ಮಂಡಕಳ್ಳಿ ವಿಮಾನ ನಿಲ್ದಾಣ, ಜಿಲ್ಲಾಡಳಿತ ಕಚೇರಿ ಮತ್ತು ಮೈಸೂರು ದಸರಾ ವೆಬ್ಸೈಟ್ನಲ್ಲಿ ಪ್ರವಾಸಿಗರು ಟಿಕೆಟ್ಗಳನ್ನು ಖರೀದಿ ಮಾಡಬಹುದು. ಟಿಕೆಟ್ ದರ ಇನ್ನೂ ನಿಗದಿ ಮಾಡಿಲ್ಲ.
ಮಾಹಿತಿ ಕೇಂದ್ರಗಳು: ದಸರಾ ಮಹೋತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ಮೈಸೂರು ಹಾಗೂ ಮೈಸೂರು ಸುತ್ತಮುತ್ತ ಸ್ಥಳಗಳ ಮತ್ತು ರಾಜ್ಯದ ಪ್ರವಾಸಿ ಸ್ಥಳಗಳ ಕುರಿತು ಮಾಹಿತಿ ನೀಡಲು 16 ಮಾಹಿತಿ ಕೇಂದ್ರಗಳು ಅ. 5ರಿಂದ 13ರವರೆಗೆ ಕಾರ್ಯನಿರ್ವಹಿಸಲಿವೆ.
ಸೇಂಟ್ ಫಿಲೊಮಿನಾ ಚರ್ಚ್, ಜಯಚಾಮರಾಜೇಂದ್ರ ಮೃಗಾಲಯ, ಅಂಬಾವಿಲಾಸ ಅರಮನೆಯ ವರಾಹ ಗೇಟ್ ಬಳಿ, ಮುಖ್ಯ ಬಸ್ನಿಲ್ದಾಣ, ಚಾಮುಂಡಿ ಬೆಟ್ಟ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಅಂಬಾವಿಲಾಸ ಅರಮನೆಯ ಬಲರಾಮ ದ್ವಾರ, ರೈಲ್ವೆ ನಿಲ್ದಾಣ ಹೊರ ಆವರಣ, ವಸ್ತುಪ್ರದರ್ಶನ ಆವರಣ, ಸೋಮನಾಥಪುರ, ಶ್ರೀರಂಗಪಟ್ಟಣ, ನಂಜನಗೂಡು, ತಲಕಾಡು, ಹುಣಸೂರು ಹಾಗೂ ತಿ. ನರಸೀಪುರದಲ್ಲಿ ಮಾಹಿತಿ ಕೇಂದ್ರಗಳನ್ನು ತೆರೆಯಲಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.