ADVERTISEMENT

ದೇವರ ಮೇಲೆ ಷರೀಫ್‌ ಭಾರ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 19:30 IST
Last Updated 14 ಮಾರ್ಚ್ 2014, 19:30 IST

ಬೆಂಗಳೂರು: ‘ಬೆಂಗಳೂರು ಕೇಂದ್ರ ಲೋಕ­ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಟಿಕೆಟ್‌ ನಿರಾಕರಿಸಿರುವುದನ್ನು ಭಾವ­ನಾ­ತ್ಮಕ­ವಾಗಿ ತೆಗೆದುಕೊಳ್ಳಲು ನಾನೇನು ಸಣ್ಣ ಹುಡುಗನಲ್ಲ. ನಾನು ದೇಶ ಸೇವೆ ಮಾಡುವ ಬಯಕೆಯುಳ್ಳ ಜವಾ­ಬ್ದಾರಿ­ಯುತ ವ್ಯಕ್ತಿ. ಆ ಕೆಲಸ ಮಾಡು­ವುದಕ್ಕೆ ನನಗೆ ಹಲವು ದಾರಿ­ಗಳಿವೆ’ ಎಂದು ಕಾಂಗ್ರೆಸ್‌ ಮುಖಂಡ ಸಿ.ಕೆ.ಜಾಫರ್‌ ಷರೀಫ್‌ ಹೇಳಿದರು.

ಹೈಕಮಾಂಡ್‌ ವಿರುದ್ಧ ಮುನಿಸಿ­ಕೊಂಡಿ­ರುವ ಅವರು ‘ಪ್ರಜಾವಾಣಿ’ ಜೊತೆ ಮಾತನಾಡುತ್ತ ತಮ್ಮ
ಅಸಮಾ­­ಧಾನ ಹೊರಹಾಕಿದರು.

‘ಭವಿಷ್ಯದ ಹಾದಿ ಕುರಿತು ನನ್ನ ತಲೆ­ಯಲ್ಲಿ ಒಂದಷ್ಟು ಯೋಚನೆಗಳಿವೆ. ಆದರೆ, ತರಾತುರಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ನಾನು ಮೆಕ್ಕಾ ಯಾತ್ರೆಗೆ ಹೋಗುತ್ತಿದ್ದೇನೆ. ಅಲ್ಲಿ ದೇವರ ಬಳಿ ಸಲಹೆ ಕೇಳುತ್ತೇನೆ. ದೇವರು ಮುಂದಿನದನ್ನು ನಿರ್ಧ­ರಿಸು­ತ್ತಾನೆ’ ಎಂದು ಮುಂದಿನ ನಡೆ ಕುರಿತು ಗುಟ್ಟು ಕಾಯ್ದುಕೊಂಡರು.

ರಿಜ್ವಾನ್‌ಗೆ ಟಿಕೆಟ್‌ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ‘ಆತ (ರಿಜ್ವಾನ್‌) ಇನ್ನೂ ಯುವಕ. ಅವರಿಗೆ ದೀರ್ಘ ಕಾಲಾವಕಾಶ ದೊರೆ­ಯುತ್ತದೆ. ಅವರಿಗೆ ನಾಯಕರ ಬೆಂಬಲ ಇದೆ ಎಂಬ ಕಾರಣಕ್ಕೆ ಕೆಲವು ಸಂದರ್ಭದಲ್ಲಿ
ಅಂತಹ ಅಭ್ಯರ್ಥಿ­ಗಳನ್ನು ಆಯ್ಕೆ ಮಾಡ­ಲಾಗುತ್ತದೆ’ ಎಂದು ಸಿಟ್ಟು ಹೊರಹಾಕಿದರು.

ಸಮಾಧಾನಕ್ಕೆ ಯತ್ನ
ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿಗಳಲ್ಲಿ ಒಬ್ಬ­ರಾಗಿರುವ ಡಾ.ಎ.­ಚೆಲ್ಲ­ಕುಮಾರ್‌ ಅವರು ಸಿ.ಕೆ.ಜಾಫರ್‌ ಷರೀಫ್‌ ಅವ­ರನ್ನು ಭೇಟಿಮಾಡಿ ಸಮಾ­ಧಾನ­ಪಡಿಸುವ ಪ್ರಯತ್ನ ಮಾಡಿದರು.

‘ನಿಮಗೆ ಅವಮಾನ ಮಾಡುವ ಉದ್ದೇಶ­ದಿಂದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್‌ ನಿರಾಕರಿಸಿಲ್ಲ. ಪಕ್ಷದ ಹಿತ­ದೃಷ್ಟಿ­ಯಿಂದ ರಿಜ್ವಾನ್‌ ಅರ್ಷದ್‌ ಅವ­ರಿಗೆ ಅವಕಾಶ ನೀಡಲಾಗಿದೆ’ ಎಂದು ಹೈಕಮಾಂಡ್‌ ನಿರ್ಧಾರ­ವನ್ನು ಷರೀಫ್‌ ಅವರಿಗೆ ಮನ­ವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.