ADVERTISEMENT

ಧಾರವಾಡ ಕೃಷಿ ವಿವಿ: ರಜತ ಮಹೋತ್ಸವ ಕೃಷಿ ಮೇಳ...

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 19:30 IST
Last Updated 8 ಸೆಪ್ಟೆಂಬರ್ 2011, 19:30 IST

ಧಾರವಾಡ:ಕೃಷಿ ವಿಶ್ವವಿದ್ಯಾಲಯದಲ್ಲಿ ನಾಲ್ಕು ದಿನಗಳ ಕೃಷಿ ಮೇಳ-2011, ದಕ್ಷಿಣ ಪ್ರಾಂತೀಯ ಕೃಷಿ ಉತ್ಸವ ಹಾಗೂ ಬೀಜ ಮೇಳ ಶುಕ್ರವಾರ ಆರಂಭವಾಗಲಿದೆ. ಕೃಷಿ ವಿವಿ ಆವರಣ ರೈತರ ಉತ್ಸವಕ್ಕೆ ಸಜ್ಜಾಗಿದ್ದು, ಮುಖ್ಯ ವೇದಿಕೆಗಳು ಸಿದ್ಧಗೊಂಡಿವೆ.

ಸುಸ್ಥಿರ ಕೃಷಿಗಾಗಿ ಸಮಗ್ರ ಕೃಷಿ ಪದ್ಧತಿಗಳ ಪ್ರದರ್ಶನ ಹಾಗೂ ಮಾಹಿತಿ ಬಗ್ಗೆ ಮೇಳದಲ್ಲಿ ಒತ್ತು ನೀಡಲಾಗಿದೆ. ಸಾವಯವ ಕೃಷಿ, ಸಮಗ್ರ ಕೃಷಿ ಪದ್ಧತಿಗಳು ಹಾಗೂ ಪರ್ಯಾಯ ಬೆಳೆಯ ಕೃಷಿ ಬಗ್ಗೆ ಮಾಹಿತಿ ನೀಡುಲಾಗುವುದು.

ಸುಧಾರಿತ ತಳಿಗಳ ಬೀಜ,ಸಸಿ, ಬೀಜೋತ್ಪಾದನೆ, ಸಂಗ್ರಹಣೆ ಮತ್ತು ಮಾರಾಟ ಮತ್ತು ಕೃಷಿ ಪ್ರಕಟಣೆಗಳ ಮಾರಾಟ. ಪ್ರಚಲಿತ ಕೃಷಿ ಸಮಸ್ಯೆಗಳ ಬಗ್ಗೆ ತಜ್ಞರೊಂದಿಗೆ ವಿಚಾರ ವಿನಿಮಯ, ತೋಟಗಾರಿಕೆ ಬೆಳೆಗಳ ಬೇಸಾಯ ಬಗ್ಗೆ ಮಾಹಿತಿ, ಫಲ-ಪುಷ್ಪ ವಸ್ತು ಪ್ರದರ್ಶನ, ಮಳೆ ನೀರು ಕೊಯ್ಲು, ನೀರು ಸಂರಕ್ಷಣೆ ಮತ್ತು ಜಲಾನಯನ ಅಭಿವೃದ್ಧಿ ಸೇರಿದಂತೆ ಕೃಷಿ ಸಂಬಂಧಿತ ಎಲ್ಲ ಮಾಹಿತಿಗಳನ್ನು ಕೃಷಿ ಮೇಳದಲ್ಲಿ ರೈತರಿಗೆ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.

ಈ ಬಾರಿ ಕೃಷಿ ಮೇಳಕ್ಕೆ 8 ಲಕ್ಷಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ. ವಸ್ತುಪ್ರದರ್ಶನಕ್ಕಾಗಿ 20 ಎಕರೆ ಪ್ರದೇಶದಲ್ಲಿ 300 ಸಾಮಾನ್ಯ ಮಳಿಗೆಗಳು ಹಾಗೂ 110 ಹೈಟೆಕ್ ಮಳಿಗೆಗಳನ್ನು ಹಾಕಲಾಗಿದೆ.
ಕೃಷಿ ಮೇಳದ ಅಂಗವಾಗಿ ನಡೆಯಲಿರುವ ಬೀಜ ಮೇಳಕ್ಕೆ ಸೆ. 9 ರಂದು ಮಧ್ಯಾಹ್ನ 12ಕ್ಕೆ ಚಾಲನೆ ದೊರೆಯಲಿದೆ.

ಬೀಜ ಮೇಳದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ಕೃಷಿ ಮಿಶನ್ ಅಧ್ಯಕ್ಷ ಡಾ. ಎಸ್. ಎ.ಪಾಟೀಲ, ನವದೆಹಲಿಯ ರಾಷ್ಟ್ರೀಯ ಕೃಷಿ ಅನುಸಂಧಾನ ಪರಿಷತ್ತಿನ ಸಹಾಯಕ ಮಹಾ ನಿರ್ದೇಶಕ (ಬೀಜ ವಿಭಾಗ) ಡಾ. ಜೆ.ಎಸ್.ಸಂದು, ನಿರ್ದೇಶಕ ಡಾ. ಬೆಂಗಾಲಿ ಬಾಬು, ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಆನಂದ ಕೃಷ್ಣ, ರಾಜ್ಯ ಬೀಜ ಪ್ರಮಾಣನ ಸಂಸ್ಥೆ ನಿರ್ದೇಶಕ ಸಿ.ಎನ್.ಸ್ವಾಮಿ ಆಗಮಿಸುವರು. ಕುಲಪತಿ ಡಾ. ಆರ್.ಆರ್.ಹಂಚಿನಾಳ ಅಧ್ಯಕ್ಷತೆ ವಹಿಸುವರು.

ಬೀಜ ಮೇಳದಲ್ಲಿ ಕೃಷಿ ವಿಶ್ವವಿದ್ಯಾಲಯಗಳು, ತೋಟಗಾರಿಕೆ ವಿಶ್ವವಿದ್ಯಾಲಯ,ರಾಜ್ಯ ಬೀಜನಿಗಮ, ರಾಷ್ಟ್ರೀಯ ಬೀಜ ನಿಗಮ, ಸರ್ಕಾರೇತರ ಬೀಜೋತ್ಪಾದನಾ ಸಂಸ್ಥೆಗಳು ಭಾಗವಹಿಸಲಿವೆ. ಶನಿವಾರ ಕೃಷಿ ಮೇಳದ ಉದ್ಘಾಟನೆ ನಡೆಯಲಿದೆ.

ನಾಲ್ಕು ದಿನಗಳವರೆಗೆ ಬೀಜೋತ್ಪಾದನೆ ಹಾಗೂ ಕೃಷಿ ಯಂತ್ರೋಪಕರಣಗಳು, ಸಮಗ್ರ ಕೃಷಿ ಪದ್ಧತಿಗಳು, ಸಾವಯವ ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆ ವಿಷಯ ಕುರಿತು ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಈ ಎಲ್ಲ ಕಾರ್ಯಕ್ರಮಗಳು ಮುಖ್ಯ ವೇದಿಕೆಗಳಲ್ಲಿ ನಡೆಯಲಿದ್ದು, ವೇದಿಕೆಯು ಸಜ್ಜುಗೊಂಡಿದೆ.

ಹಿಂಗಾರು ಹಂಗಾಮಿಗೆ ಭೂಮಿಯನ್ನು ಹದ ಮಾಡಿರುವ ಮಳೆಯಿಂದ ರೈತರ ಮೊಗದಲ್ಲಿ ಕಳೆ ಕಾಣುತ್ತಿದೆ. ಆದ್ದರಿಂದ ಈ ಬಾರಿಯ ರೈತರ ಜಾತ್ರೆಗೆ ಅತ್ಯಂತ ಮಹತ್ವ ಬಂದಿದೆ. ಕೃಷಿ ಕ್ಷೇತ್ರದಲ್ಲಿನ ಹೊಸ ತಾಂತ್ರಿಕ ಮಾಹಿತಿ, ಉತ್ತಮ ಗುಣಮಟ್ಟದ ಪರಿಕರಗಳು ಕೃಷಿ ವಿವಿ ಆವರಣಕ್ಕೆ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.