ಧಾರವಾಡ: ಅಸ್ಸಾಂನಲ್ಲಿ ಸೇವೆಯಲ್ಲಿದ್ದ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ವೀರಯೋಧ ಅರ್ಜುನ ಯಲ್ಲಪ್ಪ ಅಣ್ಣಿಗೇರಿ ಅವರು ಪಾಶ್ವವಾಯುವಿನಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟಿದ್ದರು.
12 ವರ್ಷದಿಂದ ಸೇನೆಯಲ್ಲಿದ್ದ ಯೋಧ ಅರ್ಜುನ. ಕರ್ತವ್ಯದಲ್ಲಿದ್ದಾಗ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅರ್ಜುನ 15 ದಿನಗಳ ಹಿಂದೆ ಊರಿಗೆ ಬಂದು ಹೊಗಿದ್ದರು. ಆತನಿಗೆ ತಂದೆ–ತಾಯಿ, ನಾಲ್ವರು ಸಹೋದರರು ಹಾಗೂ ನಾಲ್ವರು ಸಹೋದರಿಯರು ಇದ್ದಾರೆ.
ಮೊರಬ ಗ್ರಾಮದ ಪ್ಯಾಟಿ ಓಣಿಯ ಮಹತ್ಮಾ ಗಾಂಧಿ ಪುತ್ಥಳಿ ಬಳಿ ಯೋಧನ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಗ್ರಾಮದಲ್ಲಿ ಯೋಧನ ಸಂಬಂಧಿಕರ, ಸ್ನೇಹಿತರ ಮತ್ತು ಸಾರ್ವಜನಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಅರ್ಜುನ, ಕಲಘಟಗಿ ತಾಲೂಕಿನ ಹುಲಕೊಪ್ಪದ ಶಿವರಾಜದೇವಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ತಮ್ಮ ಪ್ರೌಢ ಶಾಲಾ ಶಿಕ್ಷಣ ಪೂರೈಸಿ, ಸೇನೆಗೆ ಸೇರಿದ್ದರು.
ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಉಪವಿಭಾಗಾಧಿಕಾರಿ ಪಿ.ಜಯಮಾಧವ , ಡಿವೈಎಸ್ ಪಿ ಚಂದ್ರಶೇಖರ, ತಹಸೀಲ್ದಾರ ಕೆ.ಬಿ.ಕೋರಿಶೆಟ್ಟರ್, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ವಿಂಗ್ ಕಮಾಂಡರ್ ಈಶ್ವರ ಕೋಡೊಳ್ಳಿ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.