ADVERTISEMENT

ನಕಲಿ ಲೋಕಾಯುಕ್ತ ಎಸ್‌ಪಿ ಬಂಧನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ಕಾರವಾರ: ಲೋಕಾಯುಕ್ತ ಎಸ್‌ಪಿ ಎಂದು ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಅವರಿಂದ ಲಂಚ ಪಡೆಯುತ್ತಿದ್ದ ವ್ಯಕ್ತಿ ಮತ್ತು ಆತನ ಸಹಚರನೊಬ್ಬನನ್ನು ಇಲ್ಲಿಯ ನಗರ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬಂಧಿತರನ್ನು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕು ಸದಲಗಾದ ವಜಾಗೊಂಡಿರುವ ಪೊಲೀಸ್ ಕಾನ್‌ಸ್ಟೆಬಲ್ ಮುರಿಗೆಪ್ಪ ಕುಂಬಾರ (45) ಮತ್ತು ಬೆಳಗಾವಿಯ ಬಸವಣ್ಣ ಎಂದು ಗುರುತಿಸಲಾಗಿದೆ.

ಮುರಿಗೆಪ್ಪ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಲಂಚ ಕೇಳುತ್ತಿದ್ದರೆ, ಬಸವಣ್ಣ ತನ್ನ ಬ್ಯಾಂಕ್ ಖಾತೆ ನೀಡಿ ಆತನ ಕಾರ್ಯಕ್ಕೆ ನೆರವಾಗುತ್ತಿದ್ದ. ಈತ ನಡೆಸುತ್ತಿದ್ದ ಕಾರ್ಯಕ್ಕೆ ಸಹಾಯ ಮಾಡುತ್ತಿದ್ದ ಅಶೋಕ ತಿರಕಣ್ಣನವರ ಮತ್ತು ಅಮರ್‌ಎಂಬುವವರು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ.

ಕೆಲ ದಿನಗಳ ಹಿಂದೆ ಶಿರಸಿ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ದೂರವಾಣಿ ಕರೆ ಮಾಡಿದ ಕುಂಬಾರ,  ಅವ್ಯವಹಾರ ನಡೆದಿದ್ದು ಲಂಚ ಕೊಡುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಸಂಶಯಗೊಂಡ ಎಂಜಿನಿಯರ್ ಅವರು ಲೋಕಾಯುಕ್ತ ಎಸ್‌ಪಿ ಡಿ.ಎಸ್.ಜಗಮಯ್ಯನವರ ಅವರಿಗೆ ವಿಷಯ ತಿಳಿಸಿದ್ದರು.

ಈ ಕುರಿತು ಎಸ್‌ಪಿ ಅವರು ಕಳೆದ ಡಿಸೆಂಬರ್ 28ರಂದು ನಗರ ಠಾಣೆಗೆ ದೂರು ನೀಡಿ `ವ್ಯಕ್ತಿಯೊಬ್ಬ  ಲೋಕಾಯುಕ್ತ ಎಸ್‌ಪಿ ಎಂದು ಹೆಸರು ಹೇಳಿ ಲಂಚ ಪಡೆಯುತ್ತಿದ್ದಾನೆ. ಕ್ರಮ ಕೈಗೊಳ್ಳಬೇಕು~ ಎಂದು ತಿಳಿಸಿದ್ದರು.

ನಗರ ಠಾಣೆಯ ಪಿಎಸ್‌ಐ ನಿಶ್ಚಲಕುಮಾರ, ಎಎಸ್‌ಐ ನಯನಬಾಬು ಕಾಣಕೋಣಕರ್ ಮತ್ತು ಕಾನ್‌ಸ್ಟೆಬಲ್ ಹನುಮಂತ ಕಬಾಡೆ ಈ ಮೂವರನ್ನೊಳಗೊಂಡ ತಂಡವು ಪ್ರಕರಣಕ್ಕೆ ಸಂಬಂಧಪಟ್ಟಂತೆ 200ಕ್ಕೂ ದೂರವಾಣಿ ಕರೆಗಳನ್ನು ಪರಿಶೀಲಿಸಿ, ಚಿಕ್ಕೋಡಿಗೆ ತೆರಳಿ ಅಲ್ಲಿಯ ಪೊಲೀಸರ ಸಹಾಯ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.

1986ರಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗೆ ಸೇರಿದ ಕುಂಬಾರನ ಮೇಲೆ ಬಸ್ ವಾರೆಂಟ್ ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ಆರೋಪವಿತ್ತು. ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈತನನ್ನು 1998ರಲ್ಲಿ ಸೇವೆಯಿಂದ ವಜಾ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.