ಬೆಂಗಳೂರು: `ನಗರದಲ್ಲಿ ನಾಗರಿಕರಿಗೆ ಭೂಮಿ ಕಂಪಿಸಿದ ಅನುಭವ ಆಗಿರಬಹುದು. ಆದರೆ ಅದು ಭೂಕಂಪನ ಅಲ್ಲ; ದೂರದ ಸುಮಾತ್ರದಲ್ಲಿ ಸಂಭವಿಸಿದ ಭೂಕಂಪನದ ಪರಿಣಾಮವಷ್ಟೆ~ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಪುಟ್ಟಣ್ಣ ಹೇಳಿದರು.
ವರದಿಗಾರರೊಂದಿಗೆ ಮಾತನಾಡಿದ ಅವರು, `ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ ತೀವ್ರತೆಯ ಭೂಕಂಪನವಾಗಿದೆ. ಇದರಿಂದ ಯಾವುದೇ ಹಾನಿ ಆಗಲು ಸಾಧ್ಯವಿಲ್ಲ~ ಎಂದರು.
`ರಾಜ್ಯದ ಕರಾವಳಿಯಲ್ಲಿ ಸಮುದ್ರದ ಅಲೆಗಳ ಎತ್ತರ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮಂಗಳೂರು, ಉಡುಪಿ ಮೊದಲಾದ ಪ್ರದೇಶಗಳ ಜನರು ಕಟ್ಟೆಚ್ಚರ ವಹಿಸುವ ಅಗತ್ಯವಿದೆ. ಮುಂಜಾಗ್ರತಾ ಕ್ರಮವಾಗಿ ಸಮುದ್ರದ ತೀರ ಪ್ರದೇಶಗಳಿಗೆ ಸಾರ್ವಜನಿಕರು ಹೋಗಬಾರದು~ ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ವಿ.ಎಸ್.ಪ್ರಕಾಶ್, `ನಗರಕ್ಕೆ 2,200 ಕಿ.ಮೀ. ದೂರದಲ್ಲಿರುವ ಸುಮಾತ್ರ ದ್ವೀಪದಲ್ಲಿ ಭೂಕಂಪನವಾಗಿದೆ. ಆ ಕಂಪನ ಉಂಟು ಮಾಡಿದ ಆಘಾತದ ಅಲೆಗಳಿಗೆ ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳು ನಡುಗಿವೆ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.