ADVERTISEMENT

ನಟಿ ಪೂಜಾ ಗಾಂಧಿ ವಿರುದ್ಧ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 19:59 IST
Last Updated 24 ಡಿಸೆಂಬರ್ 2012, 19:59 IST

ಬೆಂಗಳೂರು: ನಟಿ ಪೂಜಾ ಗಾಂಧಿ ಮತ್ತು ಅವರ ತಂದೆ ಪವನ್‌ಕುಮಾರ್ ಗಾಂಧಿ ತಮಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಡಾ.ಕಿರಣ್ ಎಂಬುವರು ನಗರದ ಎಂಟನೇ ಎಸಿಎಂಎಂ ನ್ಯಾಯಾಲಯದಲ್ಲಿ ಸೋಮವಾರ ದೂರು ದಾಖಲಿಸಿದ್ದಾರೆ.

`ಪೂಜಾ ಗಾಂಧಿ ಕುಟುಂಬದಿಂದ ನನಗೆ ಪ್ರಾಣ ಬೆದರಿಕೆ ಇದ್ದು, ರಕ್ಷಣೆ ನೀಡಬೇಕೆಂದು ಕೋರಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ಕೊರಿಯರ್ ಮೂಲಕ ಶುಕ್ರವಾರ ದೂರಿನ ಪ್ರತಿ ಕಳಿಸಿದ್ದೆ. ಆದರೆ, ಪೊಲೀಸರು ಈವರೆಗೂ ದೂರಿನ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ನನಗೆ ರಕ್ಷಣೆಯನ್ನೂ ನೀಡಿಲ್ಲ. ಹೀಗಾಗಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೇನೆ' ಎಂದು ಕಿರಣ್ `ಪ್ರಜಾವಾಣಿ'ಗೆ ತಿಳಿಸಿದರು.

`ಕೆಲ ಚಿತ್ರ ನಿರ್ಮಾಪಕರ ಮೂಲಕ ಏಳು ವರ್ಷಗಳ ಹಿಂದೆ ಪೂಜಾ ಅವರ ಪರಿಚಯವಾಗಿತ್ತು. 2009ರಲ್ಲಿ ಸಿನಿಮಾ ಒಂದರ ನಿರ್ಮಾಣಕ್ಕೆ 20 ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿದ್ದೆ. ಆ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದ ಪೂಜಾ ಅವರಿಗೆ ಎಂಟು ಲಕ್ಷ ರೂಪಾಯಿ ಮುಂಗಡ ಹಣ ನೀಡಿದ್ದೆವು. ಕಾರಣಾಂತರಗಳಿಂದ ಆ ಸಿನಿಮಾ ನಿರ್ಮಾಣ ಮುಂದುವರಿಸಲಾಗಲಿಲ್ಲ. ಆದರೆ, ಒಪ್ಪಂದದ ಪ್ರಕಾರ ಇನ್ನೂ 8 ಲಕ್ಷ ಹಣ ನೀಡುವಂತೆ ಪೂಜಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಅಂದಿನಿಂದ  ಜೀವ ಬೆದರಿಕೆ ಹಾಕುತ್ತಿದ್ದಾರೆ' ಎಂದು ಕಿರಣ್ ವಿವರಿಸಿದರು.

`ಪೂಜಾ ಮತ್ತು ಆನಂದಗೌಡ ಅವರ ನಿಶ್ಚಿತಾರ್ಥ ಮುರಿದು ಬಿದ್ದ ದಿನ (ಡಿ.19) ಆಕೆ ನನಗೆ ಕರೆ ಮಾಡಿ, `ಈ ಹಿಂದೆ ನಮ್ಮ ನಡುವೆ ನಡೆದಿದ್ದ ವಿವಾದದ ಕಾರಣದಿಂದಲೇ ನಿಶ್ಚಿತಾರ್ಥ ಮುರಿದು ಬಿದ್ದಿದೆ. ಸುಪಾರಿ ಕೊಡಿಸಿ ನಿನ್ನನ್ನು ಕೊಲೆ ಮಾಡಿಸುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿದರು. ಆ ನಂತರ ಅವರ ತಂದೆಯೂ ಕರೆ ಮಾಡಿ ಬೆದರಿಕೆ ಹಾಕಿದರು' ಎಂದರು.

`ಕಿರಣ್ ಮಾನಸಿಕ ಅಸ್ವಸ್ಥ, ಅವರ ನಡವಳಿಕೆ ಸರಿಯಿಲ್ಲ ಎಂದು ಪೂಜಾ ಗಾಂಧಿ ಮಾಧ್ಯಮಗಳ ಮುಂದೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೇ ರಾಜಕೀಯ ಪ್ರಭಾವ ಬಳಸಿ ತಮ್ಮ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಂತೆ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ನ್ಯಾಯಾಲಯಕ್ಕೆ ನೇರವಾಗಿ ದೂರು ಸಲ್ಲಿಸಿದ್ದೇವೆ. ಇದೇ 26ಕ್ಕೆ ಪ್ರಕರಣದ ವಿಚಾರಣೆ ನಡೆಯಲಿದೆ' ಎಂದು ಕಿರಣ್ ಪರ ವಕೀಲರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.