ಬೆಂಗಳೂರು: ಮಂಗಳೂರಿನ `ಮಾರ್ನಿಂಗ್ ಮಿಸ್ಟ್~ ಹೋಂಸ್ಟೇನಲ್ಲಿ ಜುಲೈ 28ರಂದು ನಡೆದ್ದ್ದಿದು `ರೇವ್ ಪಾರ್ಟಿ~ ಅಲ್ಲ, ಅದು ಇಬ್ಬರು ವಿದ್ಯಾರ್ಥಿಗಳ ಹುಟ್ಟುಹಬ್ಬದ ಆಚರಣೆ ಎಂದು ಸರ್ಕಾರ ಗುರುವಾರ ಹೈಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸಿದೆ.
`ಅಂದು ಇಬ್ಬರು ವಿದ್ಯಾರ್ಥಿಗಳ ಹುಟ್ಟುಹಬ್ಬ ಇತ್ತು. ಅದು ಹುಟ್ಟುಹಬ್ಬಕ್ಕಾಗಿ ನಡೆದ ಪಾರ್ಟಿ ಎಂದು ತನಿಖೆಯಿಂದ ತಿಳಿದುಬಂದಿದೆ. ಅಲ್ಲಿ ಮಾದಕ ವಸ್ತುಗಳು ಪತ್ತೆಯಾಗಿಲ್ಲ. ಎಂಟು ಬಿಯರ್ ಬಾಟಲಿಗಳು ಹಾಗೂ ನಾಲ್ಕು ಕೋಕಾಕೋಲಾ ಬಾಟಲಿಗಳು ಸಿಕ್ಕಿವೆ. ಇದನ್ನು ಹೊರತುಪಡಿಸಿ ಒಡೆದ ಬಳೆಗಳು, ಕಿವಿ ಓಲೆಗಳು, ಮುರಿದ ಕುರ್ಚಿ, ಚಾಕು ಅಲ್ಲಿ ದೊರೆತಿವೆ~ ಎಂದು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಔರಾದಕರ್ ಪ್ರಮಾಣ ಪತ್ರದಲ್ಲಿ ತಿಳಿಸಿದರು.
ಘಟನೆಯನ್ನು ಸಿಬಿಐ ತನಿಖೆಗೆ ವಹಿಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆದೇಶಿಸುವಂತೆ ಕೋರಿ ವಕೀಲ ಎಸ್.ವಾಸುದೇವ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಈ ಮಾಹಿತಿ ನೀಡಲಾಗಿದೆ. ಈಗಾಗಲೇ ವಿಸ್ತೃತ ತನಿಖೆ ನಡೆಸಲಾಗಿದೆ, ಇದನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.
22 ಮಂದಿ ಬಂಧನ: `ಪಾರ್ಟಿ ನಡೆಸುವ ಜನರಿಗೆ ಕೊಠಡಿ ಬಾಡಿಗೆಗೆ ನೀಡಲು ಮಾರ್ನಿಂಗ್ ಮಿಸ್ಟ್ನ ಮಾಲೀಕರು ಪರವಾನಗಿ ಪಡೆದುಕೊಂಡಿಲ್ಲ ಎಂಬ ಅಂಶ ತನಿಖೆಯಿಂದ ತಿಳಿದುಬಂದಿದೆ. ಘಟನೆಗೆ ಕಾರಣವಾಗಿರುವ ಇಬ್ಬರು ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ 22 ಮಂದಿಯನ್ನು ಬಂಧಿಸಲಾಗಿದೆ. ಹಿಂದೂ ಜಾಗರಣಾ ವೇದಿಕೆಯ ಸುಭಾಷ್ ಪಡೀಲ್ ಈ ಘಟನೆಗೆ ಮುಖ್ಯ ಕಾರಣ.
ಈ ಮೊದಲು ಶ್ರೀರಾಮ ಸೇನೆಯಲ್ಲಿ ಗುರುತಿಸಿಕೊಂಡಿದ್ದ ಇವರ ವಿರುದ್ಧ 2009ರ ಜನವರಿಯಲ್ಲಿ ಮಂಗಳೂರಿನ ಪಬ್ ಒಂದರ ಮೇಲೆ ನಡೆಸಿದ್ದ ದಾಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಅದು ಮಂಗಳೂರು ಜೆಎಂಎಫ್ಸಿ ಕೋರ್ಟ್ನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ.
`ಎಲೆಕ್ಟ್ರಾನಿಕ್ ಮಾಧ್ಯಮದ ಕೆಲವರಿಗೆ ದಾಳಿ ನಡೆಯುವ ವಿಷಯ ಮೊದಲೇ ತಿಳಿದಿದ್ದರೂ ಅವರು ಪೊಲೀಸರಿಗೆ ಮಾಹಿತಿ ನೀಡಿಲ್ಲ. ಮಂಗಳೂರು ಪೊಲೀಸ್ ಇಲಾಖೆಯ ಕಾರ್ಯವೈಖರಿ ಅಭೂತಪೂರ್ವವಾದುದು. ಮೊದಲೇ ವಿಷಯ ತಿಳಿದಿದ್ದರೆ ಇಂತಹ ಘಟನೆಗೆ ಅವಕಾಶವೇ ಇರುತ್ತಿರಲಿಲ್ಲ. ವಿಷಯ ತಿಳಿಯುತ್ತಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಅನಾಹುತ ತಪ್ಪಿಸಿದ್ದಾರೆ~ ಎನ್ನುವುದು ಗೃಹ ಇಲಾಖೆಯ ಹೇಳಿಕೆ.
ನೀಲಿ ವಸ್ತ್ರಧಾರಿ: `ಅಂದು ನಡೆದ ಘಟನೆಯಲ್ಲಿ ನೀಲಿ ಬಣ್ಣದ ಅಂಗಿ ಧರಿಸಿದ್ದ ವ್ಯಕ್ತಿ ಯಾರು ಎಂಬುದನ್ನು ಪತ್ತೆಮಾಡಲು ಪೊಲೀಸರಿಗೆ ಹೈಕೋರ್ಟ್ ಕಳೆದ ಬಾರಿಯ ವಿಚಾರಣೆ ವೇಳೆ ನಿರ್ದೇಶಿಸಿತ್ತು. ಆ ಬಣ್ಣದ ಷರ್ಟ್ ಧರಿಸಿದವ ಹಲ್ಲೆಗೊಳಗಾದ ವಿದ್ಯಾರ್ಥಿ ಅರ್ಜುನ್ ಎಂದು ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ. `ಅಂದು ನಡೆದ ಘಟನೆಯ ಬಗ್ಗೆ ತೀವ್ರ ಆತಂಕ ಹಾಗೂ ಕೋಪದಲ್ಲಿದ್ದ ಅರ್ಜುನ್ ಸ್ಥಳಕ್ಕೆ ಧಾವಿಸಿದ್ದ ಪೊಲೀಸರಿಗೆ ನಡೆದದ್ದನ್ನು ಆಕ್ರೋಶದಿಂದ ಬಣ್ಣಿಸುತ್ತಿದ್ದ ಅಷ್ಟೇ~ ಎಂದು ವಿವರಿಸಲಾಗಿದೆ.
ಯುವತಿಯ ಜಾಕೆಟ್: ಪಾರ್ಟಿಯಲ್ಲಿ ಇದ್ದ ಯುವತಿಯೊಬ್ಬಳ ಕೆಂಪು ಬಣ್ಣದ ಜಾಕೆಟನ್ನು ತಾನು ಧರಿಸಿಕೊಂಡಿದ್ದ ಗಣೇಶ್ ಎಂಬಾತ, ಆ ಯುವತಿಯ ಕೆನ್ನೆಗೆ ಹೊಡೆದು ಹಲ್ಲೆ ನಡೆಸಿದ್ದ. ಅಷ್ಟೇ ಅಲ್ಲದೇ, ಯುವಕ, ಯುವತಿಯರ ಬಳಿ ಇದ್ದ ಮೊಬೈಲ್ ಫೋನ್ಗಳು ಹಲ್ಲೆ ನಡೆಸಿದವರ ಬಳಿ ಇದ್ದವು. ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ ಆರೋಪಿಗಳು ಬಂದಿದ್ದ ಎರಡು ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ~ ಎಂದು ಉಲ್ಲೇಖಿಸಲಾಗಿದೆ.
ತನಿಖೆಯ ಪ್ರಗತಿ ಯಾವ ಹಂತದಲ್ಲಿ ಇದೆ ಎಂಬ ಬಗ್ಗೆ ಕೋರ್ಟ್ ಮಾಹಿತಿ ಬಯಸಿತ್ತು. ಆದರೆ ಈ ಕುರಿತು ಸೂಕ್ತ ಮಾಹಿತಿ ಪ್ರಮಾಣ ಪತ್ರದಲ್ಲಿ ಇಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಆದ್ದರಿಂದ ಸರಿಯಾದ ಪ್ರಮಾಣ ಪತ್ರ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿದರು.
ತನಿಖಾಧಿಕಾರಿ ಬದಲು ಏಕೆ... ?
ಮಂಗಳೂರು ಗ್ರಾಮಾಂತರ ವಿಭಾಗದ ಸರ್ಕಲ್ ಇನ್ಸ್ಪೆಕ್ಟರ್ ರವೀಶ್ ನಾಯಕ್ ಅವರು ಘಟನೆಯ ತನಿಖೆ ನಡೆಸುತ್ತಿದ್ದಾಗಲೇ, ಇದೇ ಪ್ರಕರಣದ ತನಿಖೆಯನ್ನು ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಜಗನ್ನಾಥ್ ಅವರಿಗೆ ವರ್ಗಾವಣೆ ಮಾಡಿರುವ ಔಚಿತ್ಯವನ್ನು ನ್ಯಾಯಮೂರ್ತಿಗಳು ತಿಳಿಯ ಬಯಸಿದರು.
`ಈ ರೀತಿ ವರ್ಗಾವಣೆ ಮಾಡಿದ್ದು ಏಕೆ? ಏನಿದರ ರಹಸ್ಯ~ ಎಂದು ಪ್ರಶ್ನಿಸಿದ ಅವರು, `ಒಳ್ಳೆಯ ಕಾರಣಕ್ಕೆ ವರ್ಗ ಮಾಡಿದ್ದರೆ ಅಭ್ಯಂತರವಿಲ್ಲ. ಇಲ್ಲದಿದ್ದರೆ ಇದು ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ. ಈಗಾಗಲೇ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ವರ್ಗಾವಣೆಗೆ ಕಾರಣ ನೀಡಿಲ್ಲ. ಈ ಬಗ್ಗೆಯೂ ಸೂಕ್ತ ಕಾರಣ ನೀಡಿ ಹೊಸದಾಗಿ ಪ್ರಮಾಣ ಪತ್ರ ಸಲ್ಲಿಸಬೇಕು~ ಎಂದು ಅವರು ಆದೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.