ADVERTISEMENT

ನಾಯರ್‌ಗೆ ಉತ್ತರಿಸಲು ಕೇಂದ್ರ ಸರ್ಕಾರ ನಕಾರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ಬೆಂಗಳೂರು (ಪಿಟಿಐ):ವಿವಾದಿತ ಅಂತರಿಕ್ಷ್-ದೇವಾಸ್ ಒಪ್ಪಂದದ ಹಿನ್ನೆಲೆಯಲ್ಲಿ ತಮ್ಮ ಮೇಲೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು ಯಾವ ಆಧಾರಗಳ  ಮೇಲೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಅವರು ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಲು ಬಾಹ್ಯಾಕಾಶ ಇಲಾಖೆ ಮತ್ತೊಮ್ಮೆ ನಿರಾಕರಿಸಿದೆ.

ಇಲಾಖೆಯ ಈ ಕ್ರಮದ ಕುರಿತು ಕೆಂಡ ಕಾರಿರುವ ನಾಯರ್, `ಇದು ಅನುಮಾನ ಹುಟ್ಟಿಸುವ ಕ್ರಮ. ನನ್ನ ಮೇಲೆ ಕ್ರಮ ಕೈಗೊಂಡ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಅದಕ್ಕೆ ಕಾರಣ ಹೇಳಲು ಸಾಧ್ಯವಿಲ್ಲ ಎಂದು ಇಲಾಖೆ ಹೇಳುತ್ತಿರುವುದು ಊಹೆಗೂ ನಿಲುಕದ ಸಂಗತಿ~ ಎಂದು ಹೇಳಿದ್ದಾರೆ. ನಾಯರ್ ಅವರು ತಮ್ಮ ಮೇಲೆ ಕ್ರಮ ಕೈಗೊಳ್ಳಲು ಕಾರಣ ಏನು ಎಂದು ಪ್ರಶ್ನಿಸಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.

ನಾಯರ್ ಸೇರಿದಂತೆ ಇಸ್ರೊದ ನಾಲ್ವರು ವಿಜ್ಞಾನಿಗಳ ವಿರುದ್ಧ ಕೈಗೊಂಡ ಕ್ರಮದ ಕುರಿತ ವಿಚಾರಣೆ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ (ಸಿಎಟಿ) ನಡೆಯುತ್ತಿರುವ ಕಾರಣ, ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಸಾಧ್ಯವಿಲ್ಲ ಎಂದು ಇಲಾಖೆ ಸ್ಪಷ್ಟನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.