ಬೆಂಗಳೂರು: ಕಾವೇರಿ ನೀರು ಹಂಚಿಕೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಮುಂದಿನ ತೀರ್ಮಾನ ಕುರಿತು ಹಿರಿಯ ವಕೀಲ ಎಫ್. ಎಸ್. ನಾರಿಮನ್ ನೇತೃತ್ವದ ಕಾನೂನು ತಜ್ಞರ ತಂಡದ ಜೊತೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
‘ತೀರ್ಪಿನ ಪುನರ್ ಪರಿಶೀಲನೆಗೆ ಅರ್ಜಿ ಸಲ್ಲಿಸುವುದೂ ಸೇರಿದಂತೆ ಮುಂದಿನ ಹೆಜ್ಜೆ ಇಡುವ ಬಗ್ಗೆ ಕಾನೂನು ಪರಿಣಿತರ ತಂಡ ನೀಡುವ ಅಭಿಪ್ರಾಯವೇ ಅಂತಿಮ. ಆನಂತರ ನಮ್ಮ ನಿಲುವನ್ನು ಕೇಂದ್ರದ ಮುಂದಿಡುತ್ತೇವೆ’ ಎಂದು ಗುರುವಾರ ಸರ್ವ ಪಕ್ಷಗಳ ಸಭೆ ಬಳಿಕ ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಅಂತರರಾಜ್ಯ ನದಿ ವಿವಾದ ಕಾಯ್ದೆ ಸೆಕ್ಷನ್ (6 ಎ) ಪ್ರಕಾರ ಕೇಂದ್ರ ಸರ್ಕಾರ ಆರು ವಾರದೊಳಗೆ ನೀರು ಹಂಚಿಕೆಗೆ ಸಂಬಂಧಿಸಿದಂತೆ ಯೋಜನೆ (ಸ್ಕೀಮ್) ರೂಪಿಸಬೇಕು ಮತ್ತು ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಮಂಡಳಿಯನ್ನು ಯಾವ ರೀತಿ ರಚನೆ ಮಾಡುತ್ತಾರೆಂಬುದು ಗೊತ್ತಿಲ್ಲ. ತೀರ್ಪಿನಿಂದ ರಾಜ್ಯದ ಹಿತಾಸಕ್ತಿಗೆ ತೊಂದರೆ ಆಗುವ ಬಗ್ಗೆ ವಿರೋಧ ಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ಈ ಎಲ್ಲ ವಿಷಯಗಳನ್ನು ನಾರಿಮನ್ ಜೊತೆ ಚರ್ಚೆ ನಡೆಸಲಾಗುವುದು ಎಂದರು.
ಶುಕ್ರವಾರ ದೆಹಲಿಯಲ್ಲಿ ಜಲಸಂಪನ್ಮೂಲ ಸಚಿವರು ದಕ್ಷಿಣದ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆ ಕರೆದಿದ್ದಾರೆ. ಅಲ್ಲಿ ಈ ವಿಷಯಗಳನ್ನು ಪ್ರಸ್ತಾಪಿ
ಸಲಾಗುತ್ತದೆ ಎಂದರು.
‘ಪ್ರತಿಕೂಲ ಅಂಶಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು. ನೀರು ನಿರ್ವಹಣೆ ಮಂಡಳಿ ರಚನೆಗೆ ಅವಕಾಶ ನೀಡುವುದು ರಾಜ್ಯದ ಹಿತಕ್ಕೆ ಮಾರಕವಾಗಬಹುದು. ಈ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು ತಿಳಿಸಿದ್ದಾಗಿ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ತಿಳಿಸಿದರು.
**
ಕಾನೂನು ಪರಿಣಿತರ ತಂಡ ನೀಡುವ ಅಭಿಪ್ರಾಯವೇ ಅಂತಿಮ. ಆನಂತರ ನಮ್ಮ ನಿಲುವನ್ನು ಕೇಂದ್ರದ ಮುಂದಿಡುತ್ತೇವೆ
– ಸಿದ್ದರಾಮಯ್ಯ, ಮುಖ್ಯಮಂತ್ರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.