ಚಾಮರಾಜನಗರ: ಪ್ರವೇಶ ಪತ್ರದಲ್ಲಿ ತಪ್ಪು ವಿಳಾಸ ನಮೂದಿಸಿದ್ದರಿಂದ 40ಕ್ಕೂ ಹೆಚ್ಚಿನ ಎಸ್ಎಸ್ಎಲ್ಸಿ ಪರಿಕ್ಷಾರ್ಥಿಗಳು ಶುಕ್ರವಾರ ಪರದಾಡಿದರು. ತಡವಾಗಿ ಬಂದರು ಎಂಬ ಕಾರಣಕ್ಕೆ ನಾಲ್ಕು ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಯಿತು.
ಚೆನ್ನಿಪುರದಮೋಳೆ ರಸ್ತೆಯಲ್ಲಿನ ಸೇವಾಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರವಾಗಿತ್ತು. ಆದರೆ, ಪ್ರವೇಶಪತ್ರದಲ್ಲಿ ವಿಳಾಸವು ಕೋರ್ಟ್ ರಸ್ತೆ ಎಂದು ತಪ್ಪಾಗಿ ನಮೂದಾಗಿತ್ತು. ಇದರಿಂದ ವಿದ್ಯಾರ್ಥಿಗಳು ಮೊದಲು ಕೋರ್ಟ್ ರಸ್ತೆಯಲ್ಲಿನ ಸೇವಾಭಾರತಿ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಬಂದರು. ನಂತರ, ಶಾಲೆಯವರು ಚೆನ್ನಿಪುರದಮೋಳೆ ರಸ್ತೆಯಲ್ಲಿನ ಆಂಗ್ಲಮಾಧ್ಯಮ ಶಾಲೆಗೆ ಕಳುಹಿಸಿದರು. ಇದರಿಂದ ಸುಮಾರು ಒಂದು ಕಿ.ಮೀ ದೂರವನ್ನು ಕ್ರಮಿಸಬೇಕಾಗಿ ಬಂದಿತು.
‘ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದಿದ್ದರಿಂದ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯಿಂದ ಪ್ರಮಾದವಾಗಿದೆ. 5 ನಿಮಿಷವಷ್ಟೇ ತಡವಾಗಿತ್ತು. ಪರೀಕ್ಷೆ ಬರೆಯಲು ಅವಕಾಶ ಕೊಡಬಹುದಿತ್ತು. ವಿಳಾಸವನ್ನು ಸರಿಯಾಗಿ ನಮೂದಿಸಿದ್ದರೆ ತಡವಾಗಿ ಹೋಗುತ್ತಿರಲ್ಲ. ಪ್ರವೇಶಪತ್ರದಲ್ಲಿನ ತಪ್ಪು ವಿಳಾಸವನ್ನು ತೋರಿಸಿದರೂ ಶಿಕ್ಷಕರು ಸ್ಪಂದಿಸದೇ ಗೇಟ್ಗೆ ಬೀಗ ಹಾಕಿದರು’ ಎಂದು ವಿದ್ಯಾರ್ಥಿಗಳು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.